ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶ
ಮುಖ್ಯವಾಗಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ತೀವ್ರ ನಿಗಾ ಇಡುವಂತೆ ಆದೇಶ ಹೊರಡಿಸಿದೆ.
ದೇಶದ ಒಟ್ಟು 32 ಪ್ರದೇಶಗಳನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಗೃಹ ಸಚಿವಾಲಯ ಗುರುತಿಸಿದೆ. ಅದರಲ್ಲಿ ರಾಜ್ಯದ ಬೆಂಗಳೂರು, ಮೈಸೂರು, ದಕ್ಷಿಣಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರಕನ್ನಡ, ಹುಬ್ಬಳ್ಳಿ -ಧಾರವಾಡ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳೂ ಸೇರಿವೆ.
'ಒಂದು ಕೋಮಿಗೆ ಜಯ ಇನ್ನೊಂದು ಕೋಮಿಗೆ ಸೋಲು' ಎನ್ನುವ ನಿರ್ಣಯಕ್ಕೆ ಬರದೆ ಜನತೆ ಶಾಂತಿಯಿಂದ ವರ್ತಿಸುವಂತೆ ಕೇಂದ್ರ ಗೃಹ ಸಚಿವ ಚಿದಂಬರಂ ದೇಶದ ನಾಗರಿಕರಲ್ಲಿ ವಿನಂತಿಸಿ ಕೊಂಡಿದ್ದಾರೆ.
ಪ್ಯಾರಾ ಮಿಲಿಟರಿ ಮತ್ತು ಸಿ ಆರ್ ಪಿ ಎಫ್ ಪಡೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿ ಕೊಳ್ಳಲಾಗಿದ್ದು, ಸೂಕ್ಷ ಪ್ರದೇಶಗಳಲ್ಲಿ ಪಡೆಗಳನ್ನು ತುರ್ತಾಗಿ ರವಾನಿಸಲು ವಾಯುಪಡೆಯ ಐಎಲ್ 76 ಮತ್ತು ಎಎನ್ 32 ವಿಮಾನಗಳನ್ನು ಬಳಸಿಕೊಳ್ಳಲಾಗುವುದು. ಈ ವಿಮಾನಗಳು ಅಹಮದಾಬಾದ್, ಕೊಯಮತ್ತೂರು, ಬಾಗ್ದೊರ್ಗಾ ಮತ್ತು ದೆಹಲಿಯಿಂದ ಕಾರ್ಯ ನಿರ್ವಹಿಸಲಿದೆ.
ತೀರ್ಪು ಹೊರ ಬಿದ್ದ ನಂತರ ಎರಡೂ ಕೋಮಿನವರಿಂದ ತೀಕ್ಷ್ಣವಾದ ಪ್ರಚೋದನಕಾರಿ ಹೇಳಿಕೆಗಳು ಬರುವ ಹಿನ್ನಲೆಯಲ್ಲಿ ಆ ನಿಟ್ಟಿನಲ್ಲೂ ನಿಗಾ ವಹಿಸುವಂತೆ ಆದೇಶ ನೀಡಲಾಗಿದೆಂದು ಚಿದಂಬರಂ ಹೇಳಿಕೆ ನೀಡಿದ್ದಾರೆ. ಎರಡೂ ಕೋಮಿನ ಸಂಘಂಟನೆಗಳ ಕಾರ್ಯಕರ್ತರು ತೀರ್ಪು ಯಾರ ಪರವಾಗಿ ಬರತ್ತದೋ ಅದರ ಆಧಾರದ ಮೇಲೆ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂದು ಗೃಹಖಾತೆ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ.