ಸೆ.30 ಬಾಬ್ರಿ ತೀರ್ಪು : ರಾಜ್ಯಾದ್ಯಂತ ಕಟ್ಟೆಚ್ಚರ
ಗುರುವಾರ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆಯಾದರೂ ಇದರ ಬಗ್ಗೆ ಅಶೋಕ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಕೂಡಾ ಶಾಲಾ ಕಾಲೇಜುಗಳ ರಜೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ಅಂತಿಮ ತೀರ್ಪಿನ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶೋಕ್, ಸಮಾಜಘಾತುಕ ಶಕ್ತಿಗಳು ಕೋಮು ಸಾಮರಸ್ಯ ಕೆಡಿಸಲು ಮುಂದಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಶಾಂತಿ ಕಾಪಾಡುವುದು ಸರಕಾರದ ಕೆಲಸ ಮಾತ್ರವಲ್ಲ, ಸಾರ್ವಜನಿಕರೂ ಇದಕ್ಕೆ ಪೂರಕವಾಗಿ ವರ್ತಿಸಬೇಕು. ಶಾಂತಿ ಕದಡುವ, ಪ್ರಚೋದನಕಾರಿ ಭಾಷಣ ಮಾಡುವ, ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ, ಆರೋಪಿಗಳು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಎಚ್ಚರಿಕೆ ನೀಡಿದರು. ಅಲಹಾಬಾದ್ ಹೈಕೋರ್ಟ್ ಗುರುವಾರ ಮಧ್ಯಾಹ್ನ 3.30ಕ್ಕೆ ಬಾಬ್ರಿ ತೀರ್ಪುನ್ನು ನೀಡಲಿದೆ.
ಶಾಂತಿ ಕಾಪಾಡಿ : ದೇವೇಗೌಡ
ಬಾಬ್ರಿ ಮಸೀದಿ ತೀರ್ಪಿಗೆ ಸಂಬಂಧಿಸಿದಂತೆ ಸೆ. 30ರಂದು ಅಲಹಾಬಾದ್ ಕೋರ್ಟ್ ನೀಡುವ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ಭಾರತದ 110 ಕೋಟಿ ಜನ ಇದಕ್ಕೆ ಬದ್ಧರಾಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಮನವಿ ಮಾಡಿಕೊಂಡಿದ್ದಾರೆ.