ನಮ್ಮ ರಾಜಕಾರಣಿಗಳಿಗೆ ಭಗತ್ ಸಿಂಗ್ ನೆನಪಿದೆಯೆ
ಆದರೆ, ಇಂದಿನ ದಿನವೇ ಅಂದರೆ, ಸೆಪ್ಟೆಂಬರ್ 27ರಂದು ಹುಟ್ಟಿ ಕೇವಲ 23 ವರ್ಷದವರಿದ್ದಾಗಲೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯಯೋಧ ಶಹೀದ್ ಭಗತ್ ಸಿಂಗ್ ಅವರ ನೆನಪು ಎಷ್ಟು ಜನರಿಗಿದೆ? ಇನ್ ಕ್ವಿಲಾಬ್ ಜಿಂದಾಬಾದ್ ಎನ್ನುತ್ತಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರಯೋಧನನ್ನು ನೆನೆಯಲು ಪಾಪ ನಮ್ಮ ರಾಜಕಾರಣಿಗಳಿಗೆ ಮರೆವಿನ ರೋಗ.
ಕಾಂಗ್ರೆಸ್ ಪಕ್ಷದಿಂದ ಇದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಸ್ವಾತಂತ್ರ್ಯ ಯೋಧರಾದ ಸುಭಾಶ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರಿಗೆ ಭಯೋತ್ಪಾದಕ ಹಣೆಪಟ್ಟಿ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಈ ಕಾರಣ ಭಗತ್ ಸಿಂಗ್ ಮೊಮ್ಮಗ ಅಭಯ್ ಸಿಂಗ್ ಸಂಧು ಆರೋಪಿಸಿದ್ದರೂ ಕೂಡ.
ಭಾರತದ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ನಡೆಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರ ಮಾರ್ಚ್ 23ರಂದು ನೇಣಿಗೇರಿಸಲಾಗಿತ್ತು. ಇವರಲ್ಲಿ ಭಗತ್ ಸಿಂಗ್ ಅವರನ್ನು ಅತ್ಯಂತ ಪ್ರಭಾವಶಾಲಿ ಕಾಂತ್ರಿಕಾರಿ ನಾಯಕ ಎಂದು ಬಣ್ಣಿಸಲಾಗಿದೆ. ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಮುಂತಾದ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಭಗತ್ ಯುವಕರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಭಗತ್ ಅಂದು ಮಾತ್ರವಲ್ಲ ಯುವಕರಿಗೆ ಇಂದಿಗೂ ಸ್ಫೂರ್ತಿದಾಯಕವಾಗಿದ್ದಾರೆ.
ಲಾಲಾ ಲಜಪತ್ ರಾಯ್ ಅವರ ಕೊಲೆಗೆ ಪ್ರತೀಕಾರವಾಗಿ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಸಾಯಿಸಿದ ಆರೋಪ ಹೊತ್ತಿದ್ದ ಭಗತ್ ಜೈಲಿನಲ್ಲಿ ಕೂಡ ಭಾರತೀಯ ಜೈಲುಹಕ್ಕಿಗಳಿಗೆ ಬ್ರಿಟಿಷರಷ್ಟೇ ಸ್ವಾತಂತ್ರ್ಯ ನೀಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇನ್ನೂ ಮೀಸೆ ಚಿಗುರುವ ಹಂತದಲ್ಲಿಯೇ ಮುರುಟಿಹೋದ ವೀರಯೋಧನಿಗೆ ಈ ಮೂಲಕವಾದರೂ ನೆನೆಯೋಣ. ಅವರ ಸ್ಫೂರ್ತಿ ಸೆಲೆಯನ್ನು ಜೀವಂತವಾಗಿಡೋಣ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ