ಕಾಮನ್ ವೆಲ್ತ್ ಕರ್ಮಕಾಂಡಕ್ಕೆ ನಾನೇ ಹೊಣೆ
ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಮಾಡಿ, 'ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷನಾಗಿ ಸಿದ್ಧತೆಗಳ ಕುರಿತು ಅವ್ಯವಸ್ಥೆಯ ಸಂಪೂರ್ಣ ಹೊಣೆ ಹೊರುವೆ. ಆದರೆ, ಕ್ರೀಡಾಂಗಣವನ್ನು ಸ್ವಲ್ಪ ಮೊದಲೇ ನಮ್ಮ ಸುಪರ್ದಿಗೆ ವಹಿಸಬೇಕೆಂಬುದು ನಮ್ಮ ಆಸೆಯಾಗಿತ್ತು" ಎಂದು ಸ್ಪಷ್ಟಪಡಿಸಿದರು.
ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು
ಎಲ್ಲ ರಾಷ್ಟ್ರಗಳ ಕ್ರೀಡಾಪಟುಗಳ ಸುರಕ್ಷತೆಯ ಹೊಣೆ ನಮ್ಮದು. ಭದ್ರತೆ ಕುರಿತಾಗಿ ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ.ಪ್ರತಿ ಕ್ರೀಡಾತಂಡದ ವಾಹನದ ಹಿಂದೆ-ಮುಂದೆ ಪೊಲೀಸ್ ವಾಹನವನ್ನು ನಿಯೋಜಿಸಲಾಗುವುದು. ಅಲ್ಲದೆ, ತಂಡದ ವಾಹನದ ಒಳಗೆ ಸಶಸ್ತ್ರ ಪೊಲೀಸರನ್ನೂ ನಿಯೋಜಿಸಲಾಗುವುದು ಎಂದರು.
ಕ್ರೀಡಾಕೂಟ ನಡೆಸಲು ಸಂಘಟನಾ ಸಮಿತಿಗೆ 30-40 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಕಲ್ಮಾಡಿ, ನಮಗೆ ಕೇವಲ 1,600 ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದ ಹಣ ಸರಕಾರ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದರು.
ಜಾಮಾ ಮಸೀದಿ ಬಳಿ ನಡೆದ ಗುಂಡಿನ ದಾಳಿಗೂ, ಕ್ರೀಡಾಕೂಟಕ್ಕೂ ಯಾವುದೇ ಸಂಬಂಧವಿಲ್ಲ . ಇದೊಂದು ಸಣ್ಣ ಘಟನೆ ಎಂದು ಪ್ರತಿಪಾದಿಸಿದ ಕಲ್ಮಾಡಿ, ಈ ಸಲದ ಕ್ರೀಡಾಕೂಟವನ್ನು 2006ರ ಮೆಲ್ಬೋರ್ನ್ ಕ್ರೀಡಾಕೂಟಕ್ಕಿಂತಲೂ ಉತ್ತಮವಾಗಿ ನಡೆಸುವ ಉದ್ದೇಶ ನಮ್ಮದು ಎಂದರು.