ಬೆಂಗಳೂರಿನಲ್ಲಿ ವಿಶ್ವ ಉರ್ದು ಸಮ್ಮೇಳನ
ಈ ಸಂಬಂಧ ನಗರದ ಪ್ರೆಸ್ಕ್ಲಬ್ ನಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದೇ ಮೊದಲ ಬಾರಿ ವಿಶ್ವ ಉರ್ದು ಸಮ್ಮೇಳನ ಹಮ್ಮಿಕೊಳ್ಳುತ್ತಿರುವ ಹೆಮ್ಮೆಗೆ ರಾಜ್ಯ ಉರ್ದು ಅಕಾಡೆಮಿ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಉರ್ದು ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬರಹಗಾರರು, ಸಾಹಿತಿಗಳು ಮಂಡಿಸಲಿದ್ದಾರೆ.
ಅಲ್ಲದೆ ಜಾಗತೀಕರಣದ ಹಿನ್ನೆಲೆಯಲ್ಲಿ ವಿವಿಧ ಭಾಷೆಗಳ ಅಸ್ತಿತ್ವಕ್ಕೆ ಎದುರಾಗಿರುವ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ. ಅಮೆರಿಕ, ರಶ್ಯಾ, ಕೆನಡ, ಜರ್ಮನಿ, ಫ್ರಾನ್ಸ್, ಮಾರಿಷಸ್, ಇಂಗ್ಲೆಂಡ್, ಹಾಲೆಂಡ್, ಜಪಾನ್, ಸೌದಿ ಅರೇಬಿಯಾ, ಈಜಿಪ್ಟ್, ಬಾಂಗ್ಲಾದೇಶ, ಪಾಕಿಸ್ತಾನ, ದುಬೈ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ವರ್ಣಚಿತ್ರ, ಗಝಲ್ ಹಾಗೂ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದರಲ್ಲಿ ದೇಶ-ವಿದೇಶಗಳ ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೇಗ್ ತಿಳಿಸಿದರು. ಇದರಲ್ಲಿ ಅಪರೂಪದ ಹಸ್ತಪ್ರತಿ, ಚಿತ್ರಪ್ರದರ್ಶನ, ಪುಸ್ತಕ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಗಝಲ್, ಖವ್ವಾಲಿ ಇತ್ಯಾದಿಗಳನ್ನು ಏರ್ಪಡಿಸಲಾಗುವುದು ಎಂದು ಬೇಗ್ ತಿಳಿಸಿದರು.
ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದ್ದು, ಪ್ರಾಥಮಿಕ ಹಂತದ ಕಾರ್ಯಗಳು ನಡೆಯುತ್ತಿವೆ. ಸಮ್ಮೇಳನಕ್ಕೆ ತಗಲುವ ಅಂದಾಜು ವೆಚ್ಚ 3.5 ಕೋ. ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವಿನಂತಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಪ್ರೊ. ಎಸ್. ರಹ್ಮತುಲ್ ಹಖ್, ಸದಸ್ಯರಾದ ರವೂಫ್ ಖಾದ್ರಿ, ರಫೀ ಭಂಡಾರಿ ಹಾಗೂ ಸಿದ್ದೀಖ್ ಅಲ್ದೂರಿ ಉಪಸ್ಥಿತರಿದ್ದರು.