ಬಾಬ್ರಿ ತೀರ್ಪು : ಶಾಂತಿ ಸಭೆಯಲ್ಲಿ ಯಾರ್ಯಾರು ಇದ್ರು
ಗೃಹ ಕಚೇರಿ ಕೃಷ್ಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಧಾರ್ಮಿಕ ಮುಖಂಡರ ಸಭೆಗೆ ಮುನ್ನ ಮುಖಂಡರು ಮುಖ್ಯಮಂತ್ರಿಯವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಧಾರ್ಮಿಕ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಯತ್ನಿಸುವ ದುಷ್ಟಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗುವುದು ಎಂದರು.
ಪ್ರಕರಣದ ತೀರ್ಪು ಯಾರ ಪರವೇ ಇರಲಿ ಅಥವಾ ಯಾರ ವಿರುದ್ಧವೇ ಇರಲಿ, ನಾವು ಸಮಾಧಾನ ಚಿತ್ತದಿಂದ ಸ್ವೀಕರಿಸಬೇಕಾಗಿದೆ. ಸಮಾಜದ ನೆಮ್ಮದಿಗೆ ಮತ್ತು ಸಹಜತೆಗೆ ಧಕ್ಕೆಯಾಗದಂತೆ ಎಲ್ಲರೂ ವರ್ತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಕರೆ ನೀಡಿದರು. ಮಂಗಳೂರಿನ ವಿವಿಧ ಧಾರ್ಮಿಕ ಮುಖಂಡರು ಈಗಾಗಲೇ ಕೋಮು ಸೌಹಾರ್ದ ಸಭೆ ನಡೆಸಿ ಸೂಕ್ಷ್ಮ ಪ್ರದೇಶವೆಂದು ಜನಜನಿತವಾಗಿರುವ ಈ ಭಾಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಬದ್ಧತೆಯನ್ನು ಪ್ರಕಟಿಸಿದ್ದಾರೆ. ಇತರರೂ ಇದನ್ನು ಮಾದರಿಯಾಗಿ ಅನುಸರಿಸುವಂತೆ ಯಡಿಯೂರಪ್ಪ ಕೋರಿದರು.
ಕ್ರೈಸ್ತ ಧರ್ಮಗುರು ಬರ್ನಾಡ್ ಮೊರಸ್ ಪ್ರತಿನಿಧಿ, ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದ, ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರ ನಾಥ ಸ್ವಾಮಿ ಪ್ರತಿನಿಧಿ, ಮೌಲಾನ ಖದೀರ್ ಅಹ್ಮದ್ ಷಾ ಅದಾವುಲ್ ಆಮಿರಿ, ಮೌಲಾನ ಝಯೀಮ್ ರಝಾ ಆಬಿದಿ, ಕರ್ನಾಟಕ ಮುಸ್ಲಿಂ ಮುತ್ತಾಹಿದ್ ಮಹಾಜನ್ ಕಾರ್ಯದರ್ಶಿ ಎಸ್ ಎಂ ಇಕ್ಬಾಲ್, ರವಿಶಂಕರ್ ಗುರೂಜಿಯ ಪ್ರತಿನಿಧಿ, ವಿಶ್ವೇಶ್ವತೀರ್ಥರ ಪ್ರತಿನಿಧಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮಿಯ ಪ್ರತಿನಿಧಿ, ವಾಲ್ಮಿಕಿ ಮಹಾಸಂಸ್ಥಾನದ ಪ್ರತಿನಿಧಿ, ಮಾದಾರ ಚೆನ್ನಯ್ಯ ಸೇರಿದಂತೆ ವಿವಿಧ ಮಠಗಳ ಪ್ರತಿನಿಧಿಗಳು ತಮ್ಮ ಸಲಹೆಗಳನ್ನು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಡಾ ವಿ ಎಸ್ ಆಚಾರ್ಯ, ಕಾನೂನು ಸಚಿವ ಎಸ್ ಸುರೇಶ್ ಕುಮಾರ್, ಆರ್ ಅಶೋಕ್, ಲಕ್ಷ್ಮಣ ಸವದಿ, ವೆಂಕಟರಮಣಪ್ಪ, ಸರಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ ಅಜಯ್ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.