ಸಾಮರಸ್ಯ ಅಲ್ಲ ಹಾಸ್ಯಾಸ್ಪದ ನಡಿಗೆ : ಮಾದಿಗ ಸಮಾಜ
ಶತ ಶತಮಾನಗಳಿಂದಲೂ ತುಳಿತಕ್ಕೆ ಒಳಗಾಗಿರುವ ಹೊಲೆಯ ಮಾದಿಗರನ್ನು ಕನಿಷ್ಠ ಮಾನವೀಯ ದೃಷ್ಟಿಕೋನದಲ್ಲಿ ಕಾಣದ ಮೇಲ್ವರ್ಗದವರು ಎಲ್ಲಿ ಈ ಹೊಲೆಯ ಮಾದಿಗರು ಮತಾಂತರ ಹೊಂದಿ ಹಿಂದೂ ಸಮುದಾಯ ಅಲ್ಪಸಂಖ್ಯಾತವಾಗಿ ಬಿಡುತ್ತದೆಯೋ ಎಂಬ ಭೀತಿಯಿಂದ ಈ ಕುತಂತ್ರ ರೂಪಿಸಲಾಗಿದೆ.
ಹೊಲೆಯ ಮಾದಿಗರಲ್ಲಿ ಬಿರುಕು ಮೂಡಿಸುವ ಉದ್ದೇಶದಿಂದ ಮಾದಾರ ಚನ್ನಯ್ಯ ಸ್ವಾಮಿಗಳನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಮಹಾಸಭಾ ಪ್ರಕಟಣೆಯ ಮೂಲಕ ಖಂಡಿಸಿದೆ.
ದಲಿತರ ಕೇರಿಗಳಿಗೆ ಪೇಜಾವರ ಶ್ರೀಗಳು ಪಾದಯಾತ್ರೆ ಹಾಗೂ ಬ್ರಾಹ್ಮಣರ ಗಲ್ಲಿಗಳಿಗೆ ಮಾದಾರ ಚನ್ನಯ್ಯ ಸ್ವಾಮಿಗಳು ಪಾದಯಾತ್ರೆ ನಡೆಸುತ್ತಿದ್ದು, ಕೇವಲ ಇಂತಹ ಪಾದಯಾತ್ರೆಗಳಿಂದ ದಲಿತರಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ. ಮೇಲ್ವರ್ಗದವರ ಮನ ಪರಿವರ್ತನೆಯಿಂದ ಮಾತ್ರ ಸಮಾನತೆ ಬರಲು ಸಾಧ್ಯ ಎಂದು ಮಹಾಸಭಾ ಅಭಿಪ್ರಾಯಪಟ್ಟಿದೆ.
ಮಾದಾರ ಚನ್ನಯ್ಯ ಸ್ವಾಮಿಗಳು ಇತಿಹಾಸ ಮರೆತಿರುವುದು ಶೋಚನೀಯ. ಮೊದಲು ಒಡೆದು ಹೋಗಿರುವ ಮಾದಿಗ ಹೊಲೆಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ತುಂಬುವ ಕೆಲಸ ಮಾಡಬೇಕು ಎಂದು ಮಹಾಸಭಾ ಅಧ್ಯಕ್ಷ ದಶರಥ್ ದೊಡ್ಡಮನಿ ಸಲಹೆ ನೀಡಿದ್ದಾರೆ.