ಸಂಪುಟ ವಿಸ್ತರಣೆ: ಮೂವರು ಸಚಿವರು ಮನೆಗೆ
ಸಂಪುಟಕ್ಕೆ ಆರು ಮಂದಿ ಸೇರ್ಪಡೆ: ಸಚಿವ ಸಂಪುಟದಲ್ಲಿ ಮೂರು ಸಚಿವ ಸ್ಥಾನ ಖಾಲಿ ಇದೆ. ಅದೇ ರೀತಿ ಹಾಲಿ ಇರುವ ಮೂರು ಸಚಿವರಿಂದ ರಾಜೀನಾಮೆ ಪಡೆಯಲಾಗುವುದು. ಆ ನಿಟ್ಟಿನಲ್ಲಿ ಒಟ್ಟು ಆರು ಮಂದಿ ನೂತನ ಸಚಿವರನ್ನು ಸಂಪುಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಈಶ್ವರಪ್ಪ ಖಚಿತಪಡಿಸಿದ್ದಾರೆ. ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ್ ಹಾಗೂ ಮುಮ್ತಾಜ್ ಅಲಿಖಾನ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಆದರೆ, ಸಂಪುಟಕ್ಕೆ ಸೇರಲಿರುವ ಸಚಿವರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ಸಿಸಿ ಪಾಟೀಲ್, ಅನೇಕಲ್ ನಾರಾಯಣ ಸ್ವಾಮಿ, ಸಿ.ಎಚ್ ವಿಜಯಶಂಕರ್, ಜೀವರಾಜ್ ಸೇರ್ಪಡೆ ಖಚಿತ ಎನ್ನಲಾಗಿದೆ.
ನಾಳೆ ಪ್ರಮಾಣವಚನ ಸ್ವೀಕಾರ: ನಾಳೆ ಬೆಳಗ್ಗೆ 9.30ಕ್ಕೆ ರಾಜಭವನದಲ್ಲಿ ಆರು ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಚಟುವಟಿಕೆ ನಡೆದಿಲ್ಲ ಎಂದು ಸಿಎಂ ಯಡಿಯೂರಪ್ಪ ಕೂಡಾ ಹೇಳಿದ್ದಾರೆ.
ಶ್ರೀರಾಮುಲು ನಿವಾಸದಲ್ಲಿ ಸಭೆ: ಕಂದಾಯ ಸಚಿವ ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಸಚಿವ ಶ್ರೀರಾಮುಲು ನಿವಾಸದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಚಿವ ಶಿವನಗೌಡ ನಾಯಕ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು, ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿದೆ.
ಗೂಳಿಹಟ್ಟಿ ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ: ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರ ಮೂರು ಬೆಂಬಲಿಗರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ. ಸಚಿವ ಸಂಪುಟದಿಂದ ಗೂಳಿಹಟ್ಟಿ ಅವರನ್ನು ಸಂಪುಟದಿಂದ ಕೈಬಿಡುತ್ತಿದ್ದಾರೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಬೆಂಬಲಿಗರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹನುಮಂತು, ಅನಂತು, ಗಿರೀಶ್ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.