ಕಿಮ್ಸ್ ನಲ್ಲಿ ಪಾನಗೋಷ್ಠಿ ತನಿಖೆಗೆ ಆಗ್ರಹ
ನಿಗಧಿಯಾಗಿದ್ದ ಕಿಮ್ಸ್ ಸುವರ್ಣ ಮಹೋತ್ಸವ ಕಾರ್ಯಕ್ರಮ ಸೇರಿದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರೂ, ಪಾನಗೋಷ್ಠಿ ಏರ್ಪಡಿಸಿದ್ದರು. ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ಸರ್ಕಾರ ಶೋಕಾಚರಣೆ ಆಚರಿಸಲು ರಜೆ ನೀಡಿದ್ದನ್ನು ವೈದ್ಯ ಸಮೂಹ ಈ ರೀತಿ ದುರುಪಯೋಗಪಡಿಸಿಕೊಂಡಿದ್ದಾರೆ.
ಕಿಮ್ಸ್ ವೈದ್ಯರು ಕನಿಷ್ಠ ಪ್ರಜ್ಞೆ ಇಲ್ಲದೆ ಅತಿಯಾಗಿ ಮದ್ಯ ಸೇವಿಸಿ ನೆಲದ ಮೇಲೆ ನಿಲ್ಲಲು ಆಗದೆ ತೂರಾಡುತ್ತಾ, ಅಸಭ್ಯವಾಗಿ ಕುಣಿದು ಕುಪ್ಪಳಿಸಿ, ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವ ಸುತ್ತಿರುವ ದೃಶ್ಯ ಖಾಸಗಿ ಸುದ್ದಿವಾಹಿನಿಗಳ ಮೂಲಕ ದೇಶದಾದ್ಯಂತ ಪ್ರಸಾರವಾಗಿದೆ.ಮಧ್ಯರಾತ್ರಿ 1:30ರ ವರೆಗೆ ಪಾನಗೋಷ್ಠಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಾಹಿನಿಗಳ ಮುಂದೆ ಹೇಳಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಪುಟ್ಟರಾಜ ಗವಾಯಿಗಳ ಶೋಕಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಪಾನಗೋಷ್ಠಿ ಮಾಡುವ ಮೂಲಕ ಗವಾಯಿಗಳಿಗೆ, ನಾಡಿನ ಸಂಸ್ಕೃತಿಗೆ ಅವಮಾನ ಮಾಡಿದ ಕಿಮ್ಸ್ನ ವೈದ್ಯರ ವಿರುದ್ಧ ಹುಬ್ಬಳ್ಳಿಯ ಜೈ ಭೀಮಾ ಸಂಘಟನೆ ಮತ್ತು ಕದಂಬ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದು, ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.