ಇನ್ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ದಾಸೋಹ
ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಡಿ. ಸುಧಾಕರ್ ಶುಕ್ರವಾರ ಇಂಥದೊಂದು ಫರ್ಮಾನು ಹೊರಡಿಸಿದ್ದಾರೆ. ದೇವಾಲಯದ ಆದಾಯ ನೋಡಿಕೊಂಡು ಅನ್ನ ದಾಸೋಹ ಏರ್ಪಡಿಸುವಂತೆ ಸೂಚನೆ ಕೊಟ್ಟಿದ್ದಾರೆ. ಅಂದಹಾಗೆ ದೇವಾಲಯಗಳನ್ನು 'ಎ" ಮತ್ತು 'ಬಿ" ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ. ವಾರ್ಷಿಕ ಒಂದು ಕೋಟಿ ರೂ.ಗಳಿಗೆ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳು 'ಎ" ಶ್ರೇಣಿಯಲ್ಲಿದ್ದರೆ ಅದಕ್ಕೂ ಕಡಿಮೆ ವರಮಾನ ತರುವಂಥವು 'ಬಿ" ಗ್ರೇಡ್ನಲ್ಲಿ ಇರಿಸಲಾಗಿದೆ.
ಈ ದೇವಾಲಯಗಳಲ್ಲಿ ಮಾತ್ರ ಅನ್ನ ದಾಸೋಹ ಆರಂಭವಾಗಲಿದೆ. ಮೈಸೂರಿನ ಚಾಮುಂಡಿ, ನಂಜನಗೂಡಿನ ನಂಜುಂಡೇಶ್ವರ, ಕೊಳ್ಳೇಗಾಲದ ಮಲೆ ಮಹದೇಶ್ವರ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ 'ಎ" ಗ್ರೇಡ್ನಲ್ಲಿವೆ. ತೊಂದರೆ ಕೊಟ್ಟರೆ ಕ್ರಮ: ಅನ್ನ ದಾಸೋಹದ ಜತೆಗೆ ಭಕ್ತರಿಗೆ ತೊಂದರೆ ಕೊಡುವ ಹಾಗೂ ಶೋಷಣೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಅನ್ನ ದಾಸೋಹ ನಡೆಸಲು ಹಣಕಾಸು ನೆರವು ಅಗತ್ಯ. ದೇವಾಲಯದ ಆದಾಯ ಹೆಚ್ಚಿಸುವುದರ ಜತೆಗೆ ಭಕ್ತರಿಂದಲೂ ನೆರವು ಪಡೆಯುವಂತೆ ಸೂಚಿಸಲಾಗಿದೆ. ಈ ಕ್ರಮದಿಂದ ಭಕ್ತರಿಗೆ ತೃಪ್ತಿಯಾಗುತ್ತದೆ ಎಂಬ ನಂಬಿಕೆ ನನ್ನದು ಎಂದರು. ಎಲ್ಲಕ್ಕಿಂತ ಮುಖ್ಯವಾಗಿ ದೇವಾಲಯಗಳ ಆಸ್ತಿ ರಕ್ಷಣೆ ಮಾಡುವ ಸವಾಲು ಇಲಾಖೆ ಮುಂದಿದೆ.
ದೇವಾಲಯಗಳ ಆವರಣ, ಪ್ರಾಂಗಣ, ಛತ್ರ, ವಸತಿ ಗೃಹ, ಉದ್ಯಾನಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಎಲ್ಲವನ್ನೂ ಸುಸ್ಥಿತಿಯಲ್ಲಿಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.
ಆಂಧ್ರ ಸಚಿವರ ಜತೆ ಚರ್ಚೆ : ತಿರುಮಲದಲ್ಲಿ 500 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐದು ಕೋಟಿ ರೂ. ಈಗಾಗಲೇ ಬಿಡುಗಡೆ ಆಗಿದೆ. ಯೋಜನೆಗೆ ದೇವಾಲಯದ ಆಡಳಿತ ಮಂಡಳಿ ಅನುಮೋದನೆ ಕೊಟ್ಟಿಲ್ಲ. ಇದೀಗ ಆಡಳಿತ ಮಂಡಳಿ ವಿಸರ್ಜನೆ ಆಗಿರುವುದರಿಂದ ಆಂಧ್ರದ ಮುಜರಾಯಿ ಸಚಿವರನ್ನು ಶೀಘ್ರವೇ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಸುಧಾಕರ್ ತಿಳಿಸಿದರು.