ಶುಭಾ ಕೇಸ್ ಸಹವಾಸ ಸಾಕು :ಜಡ್ಜ್ ಶ್ರೀಧರ್
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಕರಣಂ ಶ್ರೀಧರರಾವ್, ವಿರುದ್ಧ ಸೆ.8 ರಂದು ಅನಾಮಧೇಯ ಕರಪತ್ರವೊಂದನ್ನು ಹಂಚಲಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿದ್ದ ನ್ಯಾ. ಶ್ರೀಧರ್ರಾವ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
22 ವರ್ಷಗಳ ಕಾಲ ನ್ಯಾಯಾಂಗ ಸೇವೆ ಸಲ್ಲಿಸಿದ್ದು, 27 ಸಾವಿರಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ನಡೆಸಿದ್ದೇನೆ. ಆದರೆ, ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಿರುವುದು ಖೇದಕರ ಸಂಗತಿ ಎಂದು ನ್ಯಾ.ಶ್ರೀಧರ್ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ . ನನ್ನ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದುಹೇಳಿದರು.
ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ನ ಕೋಟ್ ಹಾಲ್-3 ರಲ್ಲಿ ವಿಭಾಗೀಯ ಪೀಠದ ನ್ಯಾ.ಶ್ರೀಧರ್ರಾವ್ ಮತ್ತು ಬಿ.ವಿ.ಪಿಂಟೋ ಅವರಿದ್ದ ವಿಭಾಗೀಯ ಪೀಠ ನಡೆಸುತ್ತಿತ್ತು. ಇದೇ ಸಂದರ್ಭದಲ್ಲಿ ಅನಾಮಧೇಯ ಕರಪತ್ರವೊಂದನ್ನು ಹಂಚಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ.
2003ರ ಡಿಸೆಂಬರ್ 3ರಂದು ಸಾಫ್ಟ್ ವೇರ್ ಎಂಜಿನಿಯರ್ ಗಿರೀಶ್ ಹತ್ಯೆ ನಡೆದಿತ್ತು. ಗಿರೀಶ್ರ ಭಾವಿಪತ್ನಿ ಶುಭಾ ಕೊಲೆಯ ಪ್ರಮುಖ ಆರೋಪಿಯಾಗಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯ ಶುಭಾ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ, ಶುಭಾ ಶಿಕ್ಷೆ ವಜಾಗೊಳಿಸಲು ಕೋರಿ ಆಕೆ ಪರ ವಕೀಲ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.