ಅರುಣಾಗೆ ಅನುಕಂಪ ದತ್ತಾಗೆ ಭೂಕಂಪ
ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ 3,672 ಮತಗಳ ಅಂತರದಿಂದ ಬಿಜೆಪಿಯ ಶಶಿಲ್ ನಮೋಶಿ ಅವರನ್ನು ಸೋಲಿಸಿ ಅರುಣಾ ಪಾಟೀಲ್ ರೇವೂರ್ ಅವರು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ. ಅರುಣಾ ಪಾಟೀಲ್ ಅವರಿಗೆ 39, 339 ಮತಗಳು, ಅಜಯ್ ಕುಮಾರ್ ಸಿಂಗ್ ಗೆ 35,667 ಮತಗಳು ಹಾಗೂ ನಮೋಶಿಗೆ 35,031 ಮತಗಳು ಲಭಿಸಿವೆ.
ಇನ್ನೊಂದೆಡೆ ಜೆಡಿಎಸ್ ನ ವೈಎಸ್ ವಿ ದತ್ತಾರ ಗೆಲುವಿನ ಆಸೆ ಎರಡನೇ ಬಾರಿ ಭಗ್ನಗೊಳಿಸಿಂಡಿದ್ದು, ಬಿಜೆಪಿಯ ಡಾ. ವೈಸಿ ವಿಶ್ವನಾಥ್ ಅವರು ವಿಜಯೋತ್ಸವ ಆಚರಿಸುತ್ತಿದ್ದಾರೆ. 13,892 ಮತಗಳ ಅಂತರದಿಂದ ವಿಶ್ವನಾಥ್ ಭರ್ಜರಿ ಜಯ ದಾಖಲಿಸಿದ್ದಾರೆ. ಡಾ. ವಿಶ್ವನಾಥ್ ಅವರಿಗೆ 55,796 ಮತಗಳು ಲಭಿಸಿದ್ದು, ಜೆಡಿಎಸ್ ನ ವೈಎಸ್ ವಿ ದತ್ತಾಗೆ 41,899 ಮತಗಳು ಸಿಕ್ಕಿದೆ. ಪ್ರತಿಸ್ಪರ್ಧಿ ಕೆಂಪರಾಜ್ 30,330 ಮತಗಳನ್ನು ಗಳಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಶೂನ್ಯ ಸಂಪಾದನೆಯೊಂದಿಗೆ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ.
ತ್ವರಿತವಾಗಿ ಬಂದ ಫಲಿತಾಂಶ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಯಿತು. 14 ಟೇಬಲ್ಗಳ ಮೂಲಕ 16 ಸುತ್ತು ಮತ ಎಣಿಕೆ ನಡೆಸಲಾಯಿತು. ಇದಕ್ಕಾಗಿ 54 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಡೂರಿನಲ್ಲಿ ಮತ ಎಣಿಕೆ ಕಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. 14 ಟೇಬಲ್ಗಳಲ್ಲಿ ಮತ ಎಣಿಕೆ ನಡೆಯಿತು ಎಂದು ಚುನಾವಣಾಧಿಕಾರಿ ಅಮರೇಶ್ ನಾಯಕ್ ತಿಳಿಸಿದರು.
ಗುಲ್ಬರ್ಗ ದ.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್, ಬಿಜೆಪಿಯ ಶಶಿಲ್ ನಮೋಶಿ, ಜೆಡಿಎಸ್ನ ಅರುಣಾ ಪಾಟೀಲ್, ಕಡೂರು ಕ್ಷೇತ್ರದ ಅಭ್ಯರ್ಥಿಗಳಾದ ಕಾಂಗ್ರೆಸ್ನ ಕೆ.ಎಂ.ಕೆಂಪರಾಜ್, ಬಿಜೆಪಿಯ ಡಾ.ವಿಶ್ವನಾಥ್ ಮತ್ತು ಜೆಡಿಎಸ್ನ ವೈಎಸ್ವಿ ದತ್ತಾರ ರಾಜಕೀಯ ಭವಿಷ್ಯ ನಿರ್ಧಾರವಾಗಿದೆ. ಬಳ್ಳಾರಿ ಪಾದಯಾತ್ರೆಯ ಫಲ ಕಾಂಗ್ರೆಸ್ ಗೆ ಸಿಗಲಿಲ್. ಕಡೂರಲ್ಲಿ ಏಳದ ಅನುಂಪದ ಅಲೆ ಗುಲ್ಬರ್ಗಾದಲ್ಲಿ ಕೆಲಸ ಮಾಡಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೆರವಣಿಗೆ, ವಿಜಯೋತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಎರಡೂ ಕಡೆ ಭಾರಿ ಬೆಟ್ಟಿಂಗ್ ನಡೆದಿರುವುದರಿಂದ ಪೊಲೀಸ್ ಆಯಾಕಟ್ಟಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉಪಚುನಾವಣೆ ಅಂತಿಮ ಫಲಿತಾಂಶ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಗೆದ್ದವರಿಗೆ ಹೂಗುಚ್ಛ ಕಳಿಸಿ