ಬಾಳಾ ಠಾಕ್ರೆಯಿಂದ ಸಲ್ಮಾನ್ ಗುಣಗಾನ
ಶಿವಸೇನೆಯ ಮುಖವಾಣಿ 'ಸಾಮ್ನಾ" ದೈನಿಕದಲ್ಲಿ ಬರೆದಿರುವ ಸಂಪಾದಕೀಯದಲ್ಲಿ 'ಸಲ್ಮಾನ್ ವಿರುದ್ಧ ಕ್ರೋಪಗೊಳ್ಳಲು ಯಾವುದೇ ಕಾರಣವಿಲ್ಲ. ನಿಜವಾದ ದೃಷ್ಟಿಯಿಂದ ಆತನ ಕುಟುಂಬವು ರಾಷ್ಟ್ರೀಯ ವಾದಿ ಹಾಗೂ ದೇಶಭಕ್ತವಾಗಿದೆ. ತನ್ನ ಹೇಳಿಕೆಗಳು ದೇಶದಲ್ಲಿ ಆಕ್ರೋಶವನ್ನು ಸೃಷ್ಟಿಸಿದ ಬಳಿಕ ಸಲ್ಮಾನ್ ಕ್ಷಮೆ ಕೇಳಿದ್ದಾರೆ. ಈ ಆಕ್ರೋಶವನ್ನು ವ್ಯಕ್ತಪಡಿಸಿದವರು ಬಡವರೇ ಹೊರತು ಶ್ರೀಮಂತರಲ್ಲ, ಆತನಿಗೆ ಅರಿವಾಗಿರಬೇಕು"" ಎಂದು ಪಕ್ಷದ ವರಿಷ್ಠ ಬಾಳಾಠಾಕ್ರೆ ಹೇಳಿದ್ದಾರೆ.
26/11ರ ಮುಂಬೈ ದಾಳಿಯು ಶ್ರೀಮಂತರನ್ನು ಗುರಿಯಿಟ್ಟು ನಡೆಸಿದ್ದರಿಂದಲೇ, ಆ ಘಟನೆಯ ಬಗ್ಗೆ ವಿಪರೀತ ಮಹತ್ವ ನೀಡಲಾಗುತ್ತಿದೆ ಎಂದು ಸಲ್ಮಾನ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಾಗಿ ಠಾಕ್ರೆ ಹೀಗೆ ವ್ಯಂಗ್ಯವಾಡಿದ್ದಾರೆ.
ಶಾರೂಖ್ ಖಾನ್ ರೀತಿಯಲ್ಲಿ ಸಲ್ಮಾನ್ ಖಾನ್ ಹಠಮಾರಿತನ ಪ್ರದರ್ಶಿಸದೆ, ಕ್ಷಮೆಯಾಚಿಸಿರುವುದನ್ನು ಠಾಕ್ರೆ, ತನ್ನ ಸಂಪಾದಕೀಯ ಪ್ರಸ್ತಾಪಿಸಿ ಸಲ್ಮಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಪಾಕಿಸ್ತಾನಿ ಆಟಗಾರರ ಸೇರ್ಪಡೆಗೆ ಒಲವು ವ್ಯಕ್ತಪಡಿಸಿ,ತಾನು ನೀಡಿದ ಹೇಳಿಕೆಯಿಂದ ಉಂಟಾದ ವಿವಾದಕ್ಕಾಗಿ ಕ್ಷಮೆಯಾಚಿಸಲು ಶಾರೂಕ್ ಖಾನ್ ನಿರಾಕರಿಸಿದ್ದರಿಂದ, ಅವರ ಅಭಿನಯದ 'ಮೈನೇಮ್ ಇಸ್ ಖಾನ್" ಚಿತ್ರದ ಪ್ರದರ್ಶನದ ವಿರುದ್ಧ ಶಿವಸೇನೆಯು ಪ್ರತಿಭಟನೆಯನ್ನು ನಡೆಸಿತ್ತು.