ಬ್ರಾಹ್ಮಣರ ಕೇರಿಯಲ್ಲಿ ಮಾದಾರ ಸ್ವಾಮೀಜಿ ನಡಿಗೆ
ಹಿಂದೂ ಸಮಾಜದಲ್ಲಿನ ಜಾತಿ ಆಧಾರಿತ ಭೇದ ಭಾವವನ್ನು ಅಳಿಸುವುದಕ್ಕಾಗಿ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಪಾದಯಾತ್ರೆ ನಡೆಸಿದಂತೆ, ಇಂದು ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಕೇರಿಯಲ್ಲಿ ಸಾಮರಸ್ಯ ನಡಿಗೆ ಮಾಡುವ ಮೂಲಕ ಹೊಸ ಇತಿಹಾಸ ರಚಿಸಿದರು.
ಇಂದು ಬೆಳಗ್ಗೆ 7.45ರ ಸುಮಾರಿಗೆ ಪೇಜಾವರ ಶ್ರೀಗಳು ತಂಗಿರುವ ಕೃಷ್ಣಧಾಮಕ್ಕೆ ಆಗಮಿಸಿದ ಮಾದಾರ ಶ್ರೀಗಳು, ವಿಶ್ವೇಶತೀರ್ಥರನ್ನು ಭೇಟಿ ಮಾಡಿ, ಶುಭ ಹಾರೈಕೆ ಪಡೆದರು. ದಲಿತ ವರ್ಗ ಮತಾಂತರದಿಂದ ದುರ್ಲಭವಾಗುತ್ತಿದೆ. ಆಮಿಷ ಅಥವಾ ಬಲವಂತದ ಮತಾಂತರ ಎಂದಿಗೂ ಕೂಡದು. ಹಿಂದೂ ಧರ್ಮವನ್ನು ಒಗ್ಗೂಡಿಸಲು ಅರ್ಥಪೂರ್ಣವಾದ 'ಸಾಮರಸ್ಯ ನಡಿಗೆ' ಅವಶ್ಯಕ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ನಂತರ ಕೃಷ್ಣಮೂರ್ತಿಪುರಂನ 6 ನೇ ಅಡ್ಡರಸ್ತೆಯ ರೈಲ್ವೇ ಗೇಟ್ ಬಳಿ ಮಾದಾರ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತನೀಡಲಾಯಿತು. ನಂತರ ಮುಖ್ಯರಸ್ತೆಗಳಲ್ಲಿ ಸಂಚರಿಸಿದ ಸ್ವಾಮೀಜಿಗಳಿಗೆ ಬ್ರಾಹ್ಮಣ ಕುಲದ ಮುಖಂಡರು ಸಾಥ್ ನೀಡಿದರು.
ಆಮೇಲೆ ಸಾಮರಸ್ಯ ಸಭೆಯಲ್ಲಿ ಆರೆಸ್ಸೆಸ್ ಮುಖಂಡರು, ಸಚಿವರು ಪಾಲ್ಗೊಂಡಿದ್ದರು. ಆರೆಸ್ಸೆಸ್ ಕಚೇರಿ ಮಾಧವಕೃಪದಲ್ಲಿ ಗಣಪತಿ ಪೂಜೆ ಸಲ್ಲಿಸಿ ಎಲ್ಲರಿಗೂ ಪ್ರಸಾದ ಹಂಚಿ ಸಾಮರಸ್ಯ ನಡಿಗೆಯನ್ನು ಅರ್ಥಪೂರ್ಣವಾಗಿ ಮಾದಾರ ಸ್ವಾಮೀಜಿ ಪೂರ್ಣಗೊಳಿಸಿದರು.