ಅಕ್ರಮ ದೇಗುಲ ತೆರವು ವಿಳಂಬ, ಸುಪ್ರೀಂ ಗರಂ
ಈ ವಿಚಾರದಲ್ಲಿ ರಾಜ್ಯಗಳು ತಮ್ಮ ಪ್ರತಿಕ್ರಿಯೆ ದಾಖಲಿಸುವುದಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನ್ಯಾಯಮೂರ್ತಿ ದಲ್ವೀರ್ ಭಂಡಾರಿ ನೇತೃತ್ವದ ಪೀಠ ಮಂಗಳವಾರ ನೀಡಿದೆ. ಅನೇಕ ವಿಚಾರಣೆಗಳು ನಡೆದರೂ ರಾಜ್ಯಗಳು ಈ ವಿಷಯದಲ್ಲಿ ಇದುವರೆಗೆ ತಮ್ಮ ಅಫಿಡವಿತ್ ಅಥವಾ ಅನುಷ್ಠಾನ ವರದಿ ಸಲ್ಲಿಸದಿರುವುದರಿಂದ ಸುಪ್ರೀಂ ಕೋರ್ಟ್ ಆಕ್ರೋಶಗೊಂಡಿದೆ.
ರಸ್ತೆ, ಕಾಲುದಾರಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಇನ್ನಿತರ ಯಾವುದೇ ಆರಾಧನಾಲಯಗಳಿಗೆ ಅವಕಾಶ ನೀಡಬಾರದು. ಇದರಿಂದ ದೇಶಾದ್ಯಂತ ಸಂಚಾರ ಅಡಚಣೆ, ಸ್ಥಳಾಭಾವ ಹಾಗೂ ಜನರಿಗೆ ತೊಂದರೆಯಾಗುತ್ತದೆಂದು ನ್ಯಾಯಪೀಠವು ಈ ಹಿಂದೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿತ್ತು.
ತಮಿಳುನಾಡಿನಲ್ಲಿ 77,453 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ. ರಾಜಸ್ಥಾನದಲ್ಲಿ 58,253 ಹಾಗೂ ಮಧ್ಯಪ್ರದೇಶದಲ್ಲಿ 51,624, ಮಹಾರಾಷ್ಟ್ರದಲ್ಲಿ 17,385, ಗುಜರಾತ್ ನಲ್ಲಿ 15,000 ಹಾಗೂ ಕರ್ನಾಟಕದಲ್ಲಿ 2,814 ಅಕ್ರಮ ಒತ್ತುವರಿ ನಡೆದಿದೆ. ದೆಹಲಿಯಲ್ಲಿ 52 ಪ್ರಕರಣ ಕಂಡುಬಂದಿದ್ದರೆ, ಸಿಕ್ಕಿಂ, ಮಿಜೋರಂ ಹಾಗೂ ನಾಗಾಲ್ಯಾಂಡ್ ನಲ್ಲಿ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡಗಳಿಲ್ಲ ಎಂದು ದಾಖಲೆಗಳು ತಿಳಿಸುತ್ತದೆ.