ಹಾಲಪ್ಪನ ಕೂದಲು ಕೊಂಕಿಸಲೂ ಸಾಧ್ಯವಿಲ್ಲ
ಡಿಎನ್ಎ ವರದಿಗಳ ಪ್ರಕಾರ ಹಾಲಪ್ಪ ಹಾಗೂ ಚಂದ್ರಾವತಿಯ ನಡುವೆ ದೈಹಿಕ ಸಂಬಂಧ ನಡೆದಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿರುವ ಹಾಲಪ್ಪ ಅವರ ಪರ ವಕೀಲ ಅಶೋಕ್ ಭಟ್ ಅವರು, ಬರೀ ಡಿಎನ್ಎ ಪರೀಕ್ಷೆಯಿಂದ ಹಾಲಪ್ಪ ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ನನ್ನ ಉತ್ತರ ವಿಚಾರಣೆ ಸಂದರ್ಭದಲ್ಲಿ ಹೇಳುತ್ತೇನೆ. ಹಾಲಪ್ಪ ಅವರು ನಿರಪರಾಧಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಹಾಲಪ್ಪ ಅವರ ಕೂದಲನ್ನು ಕೊಂಕಿಸಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ್ ಹೇಳಿಕೆಗಳಲ್ಲಿ ವ್ಯತ್ಯಾಸ : ಘಟನೆ ಕುರಿತಂತೆ ಚಂದ್ರಾವತಿ ಗಂಡ ವೆಂಕಟೇಶ್ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿಗೆ. ಅಲ್ಲದೆ, ಹೇಳಿಕೆ ನೀಡುವಾಗ ಅವರ ಮಗನನ್ನು ಅಂದು ಸಮೀಪದ ಲಾಡ್ಜ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಘಟನೆ ನಡೆದ ಸಮಯದ ಬಗ್ಗೆ ವೆಂಕಟೇಶ್ ಹಾಗೂ ಚಂದ್ರಾವತಿಯ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಇವೆಲ್ಲವೂ ಹಾಲಪ್ಪ ಅವರಿಗೆ ವರದಾನವಾಗಬಲ್ಲುದು.
ಡಿಎನ್ಎ ಪರೀಕ್ಷೆ ತಪ್ಪಾಗಿರಬಹುದೇ?: ಹಾಲಪ್ಪ ಅವರ ಮೇಲೆ ಚಂದ್ರಾವತಿ ಅತ್ಯಾಚಾರ ಆರೋಪ ಹೊರೆಸಿದ್ದು ಘಟನೆ ನಡೆದ ಐದಾರು ತಿಂಗಳಿನ ಬಳಿಕ ಹಾಗೂ ಅಷ್ಟು ತಿಂಗಳುಗಳ ಕಾಲ ಸಾಕ್ಷಿ ಎಂದು ಪರಿಗಣಿಸಲಾದ ಆ ಬಟ್ಟೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬರಲು ಸಾಧ್ಯವೆ? ಕಾಪಾಡಿಕೊಂಡು ಬಂದರೂ ದೂರು ನೀಡಲು ವಿಳಂಬವಾಗಿದ್ದು ಏಕೆ? ಬಟ್ಟೆ ಮೇಲಿನ ಕಲೆಗಳು ಹಾಲಪ್ಪ ಅವರದ್ದೇ ಆದರೂ ರೇಪ್ ನಡೆದಿದ್ದು ನಿಜವೇ?
ವಿಡಿಯೋ ತುಣುಕುಗಳಲ್ಲಿನ ಬಟ್ಟೆಗಳ ವ್ಯತ್ಯಾಸ, ದಿನಾಂಕದ ವ್ಯತ್ಯಾಸ, ವೆಂಕಟೇಶ್ ಮೂರ್ತಿ ಹೇಳಿಕೆ ಎಲ್ಲವೂ ಹಾಲಪ್ಪ ಅವರ ಬೆಂಬಲಕ್ಕೆ ನಿಲ್ಲಬಲ್ಲವು. ವೆಂಕಟೇಶ್ ಮೂರ್ತಿ ಅತ್ಯಾಚಾರ ವಿಡಿಯೋ ಸೆರೆಹಿಡಿದ ಮೊಬೈಲ್ ಫೋನ್ ನ ಮೆಮೋರಿ ಕಾರ್ಡ್ ಇನ್ನೂ ಸಿಐಡಿಗೆ ಏಕೆ ನೀಡಿಲ್ಲ? ಮೆಮೋರಿ ಕಾರ್ಡ್ ಕಳೆದುಹೋಗಿರುವುದು ನಿಜವೇ? ನಿಜವಾದ ಮೆಮೋರಿ ಕಾರ್ಡ್ ಹಾಲಪ್ಪನ ಕೈವಶವಾಗಿದೆಯೇ? ಹಾಲಪ್ಪನ ವಿರೋಧಿಗಳ ತಂತ್ರದ ದಾಳವಾಗಿರುವ ವೆಂಕಟೇಶ್ ಮೂರ್ತಿಯ ಮುಂದಿನ ನಡೆ ಏನು? ಎಂಬೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.
ಆದರೆ, ಡಿಎನ್ಎ ಪರೀಕ್ಷೆ ಫಲಿತಾಂಶ ಹಾಲಪ್ಪ ಅವರಿಗೆ ಮುಜುಗರ ತಂದಿರುವುದಂತೂ ನಿಜ. ಚಂದ್ರಾವತಿಯೊಂದಿಗೆ ದೈಹಿಕ ಸಂಬಂಧ ಇದ್ದುದ್ದನ್ನು ಒಪ್ಪಿಕೊಂಡು ಶಿಕ್ಷೆ ಪ್ರಮಾಣ ಏಕೆ ಕಮ್ಮಿ ಮಾಡಿಕೊಳ್ಳಬಾರದು ಎಂಬ ಸಲಹೆ ಕೂಡಾ ಹಾಲಪ್ಪ ಅವರಿಗೆ ಆಪ್ತರಿಂದ ಸಿಕ್ಕಿದೆ. ಕೇಸ್ ಇನ್ನೂ ಜಾರಿಯಲ್ಲಿರುವುದರಿಂದ ಹಾಲಪ್ಪನವರು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ.
ವೆಂಕಟೇಶ ಉವಾಚ: ಇದು ಸತ್ಯಕ್ಕೆ ಸಿಕ್ಕ ಜಯ ಎಂದು ವೆಂಕಟೇಶ್ ಮೂರ್ತಿ ಹೇಳಿದ್ದಾರೆ. ನಾನು ಕೂಡಾ ಹಾಲಪ್ಪ ಅವರ ಅಧಿದೇವತೆ ಸಿಂಗದೂರಮ್ಮನ ಭಕ್ತ. ನಾನು ಅಲ್ಲಿ ಸತ್ಯ ಸಿಗಲಿ ಎಂದು ಮೊರೆ ಹೊಕ್ಕಿದ್ದೇನೆ. ಜನಕ್ಕೆ ಹಾಲಪ್ಪ ಪ್ರಕರಣ ಸತ್ಯಾಸತ್ಯತೆ ಗೊತ್ತಾಗಿದೆ. ನ್ಯಾಯಾಲಯದಲ್ಲಿ ನಮಗೆ ಜಯ ಖಂಡಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.