ಪಂಡಿತ್ ಪುಟ್ಟರಾಜ ಗವಾಯಿ ತೀವ್ರ ಅಸ್ವಸ್ಥ
ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ವೈದ್ಯರ ಅಳಲು: ತುರ್ತು ನಿಗಾ ಘಟಕದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿರುವ ಗವಾಯಿಗಳು , ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆ ದೇವರೆ ಅವರ ದೇಹಕ್ಕೆ ಚೈತನ್ಯ ನೀಡಿ, ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡಬೇಕು. ಅವರನ್ನು ಮಠಕ್ಕೆ ಕರೆದುಕೊಂಡು ಹೋಗಲು ಭಕ್ತರ ಸಮುದಾಯ ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಅರೋಗ್ಯ ಪರಿಸ್ಥಿತಿ ಸುಧಾರಣೆಗೆ ಕಾಲಾವಕಾಶಬೇಕು ಎಂದು ಕೆ ಎಲ್ ಇಯ ಹಿರಿಯ ವೈದ್ಯಾಧಿಕಾರಿಗಳು ಹೇಳಿದರು.
1914 ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಪುಟ್ಟರಾಜು ಗವಾಯಿ ಅವರು ಹುಟ್ಟಿನಿಂದ ಅಂಧರಾದರೂ ಸಂಗೀತ ಲೋಕದಲ್ಲಿ ಅಪಾರ ಸಾಧನೆ ಮೆರೆದವರು. ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಗವಾಯಿಗಳು ಹಿಂದಿಯಲ್ಲಿ ರಚಿಸಿದ ಬಸವಪುರಾಣ ಬಹು ಜನಪ್ರಿಯ ಕೃತಿ. ಅಂಧ ಮಕ್ಕಳಿಗೆ ಸಾಹಿತ್ಯ, ಸಂಗೀತ ಬೋಧನೆ ಮಾಡುತ್ತಾ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನೆಮ್ಮದಿಯಿಂದ ಕಾಲದೂಡುತ್ತಿದ್ದರು. 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದದ ಗೌರವ ಡಾಕ್ಟರೇಟ್, ಮಧ್ಯಪ್ರದೇಶದ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ಬಸವಶ್ರೀ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಕೇಂದ್ರ ಸರ್ಕಾರ ಇವರಿಗೆ ಪದ್ಮಭೂಷಣ ನೀಡಿ ಗೌರವಿಸಿದೆ.