ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಈ ಪ್ರಕರಣದ ವಿಚಾರಣೆಯ ವೇಳೆಯಲ್ಲಿಯೇ ಗಿರೀಶ್ಗೆ ನ್ಯಾಯ ಸಿಗುತ್ತಿಲ್ಲ ಎಂಬ ಅನಾಮಧೇಯ ಕರಪತ್ರಗಳು ಹೈಕೋರ್ಟ್ ಆವರಣದಲ್ಲೇ ಹಂಚಿಕೆಯಾಗಿದ್ದು, ಇದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿ ವಾದ-ಪ್ರತಿವಾದವನ್ನು ಬುಧವಾರ ದಂದು ಅರ್ಧಕ್ಕೆ ಸ್ಥಗಿತಗೊಳಿಸಿತು.
ನ್ಯಾ. ಕರಣಂ ಶ್ರೀಧರರಾವ್ ಅವರಿರುವ ನ್ಯಾಯಪೀಠದ ಮೇಲೆ ಸಂಪೂರ್ಣ ಅವಿಶ್ವಾಸ ವ್ಯಕ್ತಪಡಿಸಿ ಮುದ್ರಣಗೊಂಡಿರುವ ಕರಪತ್ರ ಗಮನಿಸಿದ ನ್ಯಾಯಪೀಠವು ಕೂಡಲೇ ಇದರ ವಿಚಾರಣೆ ಸ್ಥಗಿತಗೊಳಿಸಿತು.
ಅಲ್ಲದೆ ಇದರ ವಿಚಾರಣೆ ಮುಂದುವರಿಸುವ ಬಗ್ಗೆ ಅರ್ಜಿದಾರರು ಹಾಗೂ ಸರ್ಕಾರ ಗುರುವಾರವೇ ಪ್ರಮಾಣಪತ್ರ ಸಲ್ಲಿಸಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ನಂತರ ಇದರ ವಿಚಾರಣೆಯ ಹಣೆಬರಹ ನಿರ್ಧರಿಸಲಾಗುವುದು ಎಂದು ನ್ಯಾಯಮೂರ್ತಿ ಶ್ರೀಧರರಾವ್ ಬುಧವಾರ ಮಧ್ಯಾಹ್ನ ಸ್ಪಷ್ಟ ಆದೇಶವನ್ನು ನೀಡಿದರು.
ಆಗಿದ್ದಾದರೂ ಏನು? : ಬುಧವಾರ ಹೈಕೋರ್ಟ್ನ ಕೋಟ್ ಹಾಲ್-3 ರಲ್ಲಿ ಗಿರೀಶ್ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು . ಆರೋಪಿ ಪರವಾಗಿ ವಕಾಲತ್ತು ವಹಿಸಿರುವ ಸಿವಿ ನಾಗೇಶ್ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಾವ್ ಕೂಡಾ ಈ ಸಂದರ್ಭದಲ್ಲಿ ಕೋರ್ಟ್ನಲ್ಲಿದ್ದರು.
ಈ ಮಧ್ಯೆ ಯಾರೋ ನ್ಯಾಯಮೂರ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಮುದ್ರಿಸಲಾದ ಕರಪತ್ರಗಳನ್ನು ಹಂಚುತಿದ್ದನ್ನು ಪ್ರಾಸಿಕ್ಯೂಟರ್ ವೆಂಕಟರಾವ್ ಅವರೇ ನ್ಯಾಯಪೀಠದ ಗಮನಕ್ಕೆ ತಂದರು. ಈ ಪತ್ರವನ್ನು ಕಂಡ ಕೂಡಲೇ ನ್ಯಾಯಪೀಠವು ತುರ್ತು ತೀರ್ಮಾನ ಕೈಗೊಂಡು ವಿಚಾರಣೆ ಮುಂದೂಡಿತು.
ಕರಪತ್ರದಲ್ಲಿ ನ್ಯಾಯಾಂಗ ಹಾಗೂ ನ್ಯಾಯಮೂರ್ತಿಗಳ ವ್ಯಕ್ತಿತ್ವ ಹಾಗೂ ವೃತ್ತಿಗೆ ಕಳಂಕ ಹಚ್ಚುವ ಹಲವಾರು ಗಂಭೀರ ಆರೋಪಗಳ ಉಲ್ಲೇಖವಿರುವುದು ಕಂಡ ಬಂದ ಕಾರಣ, ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿ ಹೊರನಡೆದರು.