ಸಿಎಂ ಪುತ್ರಿ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ
ಹೈದ್ರಾಬಾದ್ನಲ್ಲಿ 2010ರ ಸೆ.8ರಂದು ಬುಧವಾರ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ. ಅರುಣಾದೇವಿ ಅವರಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ರಾಜ್ಯ ಸಚಿವೆ ಡಿ. ಪುರಂಧೇಶ್ವರಿ ಅವರು ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಪ್ರಶಸ್ತಿ ಪ್ರದಾನ ಮಾಡಿ, ತಾಮ್ರ ಫಲಕ ನೀಡಿ ಸನ್ಮಾನಿಸಿದರು.
ಈ ಪ್ರತಿಷ್ಠಿತ ಪ್ರಶಸ್ತಿಯು 50 ಸಾವಿರ ರೂ.ಗಳ ನಗದು ಬಹುಮಾನ ಮತ್ತು ತಾಮ್ರ ಫಲಕಗಳನ್ನು ಹೊಂದಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ಇಲಾಖೆಯು ಜನ ಶಿಕ್ಷಣ ಸಂಸ್ಥೆಯ ಪ್ರಾಯೋಜಕರು. ಶಿಕಾರಿಪುರದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ (ರಿ)ಯು ಜನ ಶಿಕ್ಷಣ ಸಂಸ್ಥೆಯ ಪೋಷಕ ಸಂಸ್ಥೆಯಾಗಿದ್ದು, ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಇದರ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಜನ ಶಿಕ್ಷಣ ಸಂಸ್ಥೆ ಯಶಸ್ಸಿನ ಹಾದಿ: ಶಿವಮೊಗ್ಗ ಜಿಲ್ಲೆಯಲ್ಲಿ 2010ನೇ ಸಾಲಿನನಲ್ಲಿ ಪ್ರಾರಂಭವಾದ ಈ ಜನ ಶಿಕ್ಷಣ ಸಂಸ್ಥೆಯು ಕರ್ನಾಟಕ ರಾಜ್ಯದ ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಕೂಸು. ಜನ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಅವರು ಹೆಣ್ಣು ಮಕ್ಕಳಿಗೆ ವೃತ್ತಿ ಕೌಶಲ್ಯ ಕೊಡುವ ಹಾಗೂ ಅದರೊಂದಿಗೆ ಓದು ಬರಹ ಕಲಿತು ಸಾಕ್ಷರರಾಗುವ ಮಹೋನ್ನತ ಉದ್ದೇಶದಿಂದ ಪ್ರಾರಂಭಿಸಿದರು. ಇದೀಗ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಚುರುಕಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆಗೆ ಪ್ರಸ್ತುತ ಶಿವಮೊಗ್ಗದ ಸಂಸದ ರಾಘವೇಂದ್ರ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಕಳೆದ ಒಂದು ದಶಕದ ಅವಧಿಯಲ್ಲಿ 50 ಸಾವಿರ ಜನ ಹೆಣ್ಣು ಮಕ್ಕಳಿಗೆ ವೃತ್ತಿ ತರಬೇತಿ ನೀಡಲಾಗಿದೆ. ಇವರಲ್ಲಿ 25,000 ಜನ ಹೆಣ್ಣು ಮಕ್ಕಳು ಮುಸ್ಲಿಂ ಸಮುದಾಯದಿಂದ ಬಂದವರಾಗಿದ್ದರೆ, ಉಳಿದವರು ಹೆಚ್ಚಾಗಿ ಪರಿಶಿಷ್ಟ ಜಾತಿ, ವರ್ಗಗಳಿಂದ ಬಂದವರೇ ಆಗಿದ್ದಾರೆ. ಈ ಎಲ್ಲ ಹೆಣ್ಣು ಮಕ್ಕಳಿಗೆ ಸಂಜೆ ಹೊತ್ತಿನಲ್ಲಿ ಹೊಲಿಗೆ ತರಬೇತಿ, ಕಂಪ್ಯೂಟರ್ ಕಲಿಕೆ, ಎಂಬ್ರಾಯಿಡರಿ, ಕ್ಯಾಂಡಲ್ ಮೇಕಿಂಗ್, ಬ್ಯಾಗ್ ಮೇಕಿಂಗ್, ಕಸೂತಿ... ಸೇರಿದಂತೆ ಒಂದು ನೂರಕ್ಕೂ ಹೆಚ್ಚು ಬಗೆಯ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ.
ಹೀಗೆ ವೃತ್ತಿ ತರಬೇತಿ ತೆಗೆದುಕೊಂಡ ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಆಗುತ್ತದೆ. ಅದರಿಂದ ಅವರ ಜೀವನದ ಗತಿಯೇ ಬದಲಾಗಿ, ಅವರೆಲ್ಲರೂ ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಅರುಣಾದೇವಿ ಹೇಳಿದರು.
ಇದು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಕೂಸು. ಅವರೇ ಮುಂದಾಗಿ ನಿಂತು ಈ ಸಂಸ್ಥೆ ಕಟ್ಟಿದರು. ಅವರ ಮಾರ್ಗದರ್ಶನದಲ್ಲೇ ಇದು ಕೆಲಸ ಮಾಡುತ್ತಿದೆ. 10 ವರ್ಷಗಳ ಹಿಂದೆ ಅವರು ಇದನ್ನು ಸ್ಥಾಪಿಸಿ, ಕೆಲಸ ಕೇಳಿಕೊಂಡು ಬರುವವರಿಗೆ ವೃತ್ತಿ ತರಬೇತಿ ಕೊಟ್ಟು ಅವರ ಬಾಳಿಗೆ ಒಂದು ದಾರಿ ಬುತ್ತಿಯಾಗಲಿ ಎಂಬ ಉದ್ದೇಶದಿಂದ ಈ ಸಂಸ್ಥೆ ಪ್ರಾರಂಭಿಸಿದರು. ಇದೀಗ ಅದು ಕೇಂದ್ರ ಸರ್ಕಾರದ ಪ್ರತಿಷ್ಥಿತ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದಿದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಪುತ್ರಿಯೂ ಆಗಿರುವ ಅರುಣಾದೇವಿ ಅವರು ತಿಳಿಸಿದರು.
10 ವರ್ಷಗಳ ಹಿಂದೆ ನಾನು ಕೊಳೆಗೇರಿಗಳಿಗೆ ಹೋಗಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ವೃತ್ತಿ ತರಬೇತಿ ಕೊಡಲು ಪ್ರಾರಂಭಿಸಿದೆ. ನನಗೆ ಇದೊಂದು ಅತ್ಯಂತ ಹೆಮ್ಮೆ ತರುವ ಕೆಲಸ. ನೀವು ಮುಖ್ಯಮಂತ್ರಿಗಳ ಮಗಳಾಗಿದ್ದುಕೊಂಡು ಕೊಳೆಗೇರಿ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದೀರಲ್ಲ? ಎಂದು ಅನೇಕರು ಕೇಳುತ್ತಾರೆ. ಆದರೆ, ಇದೇ ಕೆಲಸ ನನಗೆ ಆತ್ಮತೃಪ್ತಿ ತಂದು ಕೊಡುತ್ತದೆ. ನನ್ನೂರಿನ ನನ್ನ ಜನರೊಂದಿಗೆ ಕೆಲಸ ಮಾಡುವುದೇ ನನ್ನ ಹಂಬಲ. ಇದೀಗ ಪ್ರಶಸ್ತಿ ಬಂದಿರುವುದು ಅಪಾರ ಖುಷಿ ತಂದಿದೆ. ಜೊತೆಗೆ ನಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ಅರುಣಾದೇವಿ ಹೇಳಿದರು.