ಸೆ.24 : ರಾಮಜನ್ಮಭೂಮಿ ಬಾಬ್ರಿ ಅಂತಿಮ ತೀರ್ಪು
ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಂವೀರ ಶರ್ಮಾ ನೇತೃತ್ವದ ವಿಶೇಷ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮಾಲೀಕತ್ವದ ಅಂತಿಮ ತೀರ್ಪನ್ನು ಸೆ.24ರಂದು ಘೋಷಿಸಲಾಗುವುದು ಎಂದು ಹೇಳಿದೆ. ಸುಮಾರು 18 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಕಳೆದ ಜುಲೈ 26ರಂದು ಅಂತಿಮ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.
ಶ್ರೀರಾಮನ ಜನ್ಮಸ್ಥಳ : ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ, ಈ ಪವಿತ್ರ ಸ್ಥಳದಲ್ಲಿ ರಾಮನ ಮಂದಿರವೇ ನಿರ್ಮಾಣವಾಗಬೇಕು ಎಂದು ಬಿಜೆಪಿ ಸೇರಿದಂತೆ ದೇಶದ ಪ್ರಮುಖ ಹಿಂದು ಪರ ಸಂಘಟನೆಗಳು ಒತ್ತಾಯಿಸುತ್ತವೆ. 16 ನೇ ಶತಮಾನದಲ್ಲೇ ಮೊಘಲ್ ದೊರೆ ಬಾಬರ್ ಮಸೀದಿ ಕಟ್ಟಿಸಿದ್ದ. ಈ ಪ್ರದೇಶದಲ್ಲಿ ಮತ್ತೆ ಮಸೀದಿ ನಿರ್ಮಾಣ ಮಾಡಬೇಕು ಎಂಬುದು ಮುಸ್ಲಿಮರ ಅಶಯವಾಗಿದೆ.
ಸುಮಾರು 60 ವರ್ಷಗಳ ವಿವಾದದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ನ್ಯಾಯಾಲಯ ಅಧಿಕೃತವಾಗಿ ವಿವಾದಿತ ಜಾಗದ ಮಾಲೀಕರ ಹೆಸರನ್ನು ಘೋಷಿಸಲಿದೆ. 1992 ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದೇಶಾದ್ಯಂತ ಕೋಮುಗಲಭೆ ಉಂಟಾಗಿತ್ತು. ಹಿಂದು ಕರಸೇವಕರು ಬಾಬ್ರಿ ಮಸೀದಿ ಮೇಲೆ ದಾಳಿ ನಡೆಸಿ ಮಸೀದಿಯನ್ನು ಧ್ವಂಸಗೊಳಿಸಿದ್ದರು.
ಮಸೀದಿ ಧ್ವಂಸಗೊಂಡ ನಂತರ ಸುಮಾರು 2000ಕ್ಕೊ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದಕ್ಕೆ ನೇಮಿಸಲಾಗಿರುವ ಮೂವರನ್ನೊಳಗೊಂಡ ನ್ಯಾಯಾಪೀಠದಲ್ಲಿ ಸೆ.30ಕ್ಕೆ ಒಬ್ಬರು ನ್ಯಾಯಮೂರ್ತಿಗಳು ನಿವೃತ್ತರಾಗಲಿದ್ದಾರೆ.
ಭಾರಿ ಬಿಗಿಬಂದೋಬಸ್ತ್ : ದೇಶಾದ್ಯಂತ ತೀವ್ರ ಕುತೂಹಲ ಕಾರಣವಾಗಿರುವ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದಿತ ಜಾಗದ ಮಾಲೀಕತ್ವದ ತೀರ್ಪಿನ ಘೋಷಣೆ ಅಂತಿಮ ಘಟ್ಟಕ್ಕೆ ತಲುಪಿರುವುದು ಒಂದಡೆಯಾದರೆ, ತೀರ್ಪು ಯಾರ ಪರವಾಗಿ ಬಂದರೂ ಕೋಮು ಸಂಘರ್ಷಗಳು ನಡೆಯಬಾರದು ಎಂದು ಕೇಂದ್ರ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಈಗಾಗಲೇ ವಿವಾದಿತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುಮಾರು 50 ಸಾವಿರ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲು ಮುಂದಾಗಿದೆ.
ಉತ್ತರ ಪ್ರದೇಶದ ಬಿಎಸ್ ಪಿ ಸರಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಈಗಾಗಲೇ ಘೋಷಿಸಿದ್ದಾರೆ. ಗಲಭೆ ತಪ್ಪಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಕಲ್ಯಾಣಸಿಂಗ್ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿತ್ತು. ಪಿವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿತ್ತು.