ಪತ್ನಿ ಹೆಸರಲ್ಲಿ ರೆಡ್ಡಿ ಗಣಿಗಾರಿಕೆ : ಉಗ್ರಪ್ಪ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನರೆಡ್ಡಿ ರಾಜ್ಯದಲ್ಲಿ ತಾವು ಗಣಿಗಾರಿಕೆ ವ್ಯವಹಾರ ನಡೆಸಿಲ್ಲ ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ. ಆದರೆ, ತಮ್ಮ ಪತ್ನಿ ಗಾಲಿ ಲಕ್ಷ್ಮಿಅರುಣಾ ಹೆಸರಿನಲ್ಲಿ 2005ರಿಂದ 2010ರ ಮೇ ಅಂತ್ಯದ ವೇಳೆಗೆ 231 ಕೋಟಿ ರುಪಾಯಿಗಳ ಅದಿರನ್ನು ಸಾಗಾಟ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿದರು.
2005ರಿಂದಲೂ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಆಂಧ್ರದಲ್ಲಿರುವ ಓಬಾಳಪುರಂ ಮೈನಿಂಗ್ ಕಂಪನಿ ಕಳೆದ ಆರು ತಿಂಗಳಿನಿಂದಲೂ ಬಂದ್ ಆಗಿದೆ. ಹೀಗಿದ್ದರೂ, ಕಳೆದ ಮೂರು ತಿಂಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅದಿರನ್ನು ಸಾಗಿಸಲಾಗಿದೆ. ಇದಕ್ಕೆ ಬೆಂಬಲವಾಗಿ ನಿಂತಿರುವ ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆ ತಡೆಯುವ ಬಗ್ಗೆ ಸುಳ್ಳು ಹೇಳುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಆರೋಪಿಸಿದರು.
ರೆಡ್ಡಿ ಮಾತಿಗೆ ಯಡಿಯೂರಪ್ಪ ತಲೆಯಾಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಯಡಿಯೂಪ್ಪ ಅವರಕು 17 ಗಣಿ ಕಂಪನಿಗಳಿಗೆ ಪರವಾನಿಗೆ ನೀಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ ಎಂದ ಅವರು, ಯಡಿಯೂರಪ್ಪ ಆಧುನಿಕ ಹಿಟ್ಲರ್ ನಂತೆ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.