ವೈದ್ಯ ಕಾಲೇಜು ಹಗರಣದಲ್ಲಿ ಸಚಿವರ ಪುತ್ರ ಭಾಗಿ
ಹಾಸನದ ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದ ರಹಸ್ಯವನ್ನು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟ ಅವರು, ನೇಮಕಾತಿಯಲ್ಲಿ ಹಣ ಕಳೆದುಕೊಂಡ ನೌಕರರ ಅಳಲನ್ನು ಬಹಿರಂಗಪಡಿಸಿದರು. ಅವ್ಯವಹಾರಕ್ಕೆ ಕಾರಣರಾಗಿರುವ ವೈದ್ಯಕೀಯ ಸಚಿವ ರಾಮಚಂದ್ರಗೌಡರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಿ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಮುಖ್ಯಮಂತ್ರಿಯನ್ನು ಅವರು ಆಗ್ರಹಿಸಿದ್ದಾರೆ.
ಈ ನೇಮಕಾತಿ ಹಗರಣದಲ್ಲಿ ಸಚಿವರ ಪುತ್ರ ಸಪ್ತಗಿರಿಗೌಡ ಕೂಡಾ ಭಾಗಿಯಾಗಿದ್ದಾರೆ. ಅವರ ವಿರುದ್ಧ ದೂರು ಪಡೆಯಲು ಪೊಲೀಸರು ನಿರಾಕರಿಸಿದ್ದು, ಇಂತಹ ದೊಡ್ಡ ಹಗರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಸಂಚು ನಡೆದಿದೆ. ಹಣ ನೀಡಿದರೂ ಕೂಡಾ ನೇಮಕ ಆಗದವರು ಅವ್ಯವಹಾರದ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಸಚಿವ ರಾಮಚಂದ್ರಗೌಡರ ಪುತ್ರ ಸಪ್ತಗಿರಿ ಗೌಡರ ಹೆಸರಿತ್ತು ಎಂದು ರೇವಣ್ಣ ವಿವರಿಸಿದ್ದಾರೆ.
ನೇಮಕಾತಿ ಸಂಬಂಧಿಸಿದಂತೆ ಉದ್ಯೋಗಾಕಾಂಕ್ಷಿಗಳು ಕಾಲೇಜಿಗೆ ಸಂಬಂಧಪಟ್ಟವರಿಗೆ ನೀಡಿದ ಹಣ, ಚೆಕ್ಕುಗಳು, ಪಡೆದ ಹಣವನ್ನು ಹಿಂದಿರುಗಿಸುತ್ತಿರುವ ವಿಡಿಯೊ, ಈ ಕುರಿತು ಮೊಬೈಲ್ನಲ್ಲಿ ನಡೆದ ಸಂಭಾಷಣೆಯ ದಾಖಲೆ ಸೇರಿದಂತೆ ಹಲವು ಮಹತ್ವದ ವಿವರಗಳನ್ನು ರೇವಣ್ಣ ಎಳೆಎಳೆಯಾಗಿ ಬಿಚ್ಚಿಟ್ಟರು. ಅವ್ಯವಹಾರ ನಡೆದಿರುವುದಕ್ಕೆ ಎಲ್ಲ ರೀತಿಯ ದಾಖಲೆಗಳಿದ್ದರೂ, ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.