ಸಾಕ್ಷರತೆ : ಕರ್ನಾಟಕಕ್ಕೆ ಮೂರು ರಾಷ್ಟ್ರ ಪ್ರಶಸ್ತಿ
ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರಕ್ಕೆ ಮತ್ತು ಗದಗ ಜಿಲ್ಲಾ ಲೋಕ ಶಿಕ್ಷಣ ಸಮಿತಿಗೆ ಸತ್ಯನ್ ಮೈತ್ರ ಸ್ಮಾರಕ ರಾಷ್ಟ್ರ ಮಟ್ಟದ ಸಾಕ್ಷರತಾ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಜೊತೆಗೆ ಶಿವಮೊಗ್ಗದ ಜನ ಶಿಕ್ಷಣ ಸಂಸ್ಥೆಗೆ ಸಾಕ್ಷರತೆ ಕ್ಷೇತ್ರದಲ್ಲಿ ನೀಡಿದ ವೃತ್ತಿಕೌಶಲ್ಯ ತರಬೇತಿಯನ್ನು ಪರಿಗಣಿಸಿ ರಾಷ್ಟ್ರೀಯ ಸಾಕ್ಷರತಾ ಪ್ರಾಧಿಕಾರ 'ನ್ಯಾಷನಲ್ ಲಿಟರಸಿ ಮಿಷನ್ ಅಥಾರಿಟಿ - ಯುನೆಸ್ಕೋ ಪ್ರಶಸ್ತಿ-2010'ಯನ್ನು ನೀಡಿ ಗೌರವಿಸಿದೆ.
ಮುಖ್ಯಮಂತ್ರಿ ಸಂತಸ : ಸಾಕ್ಷರತಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ 19 ರಾಜ್ಯಗಳ ಪೈಕಿ 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಕರ್ನಾಟಕ ತನ್ನ ಮಡಿಲಿಗೆ ಹಾಕಿಕೊಂಡಿದೆ. ಇದು ಅತ್ಯಂತ ಸಂತೋಷದ ಬೆಳವಣಿಗೆ ಎಂದಿರುವ ಯಡಿಯೂರಪ್ಪನವರು ಪ್ರಶಸ್ತಿ ವಿಜೇತ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.
ಪ್ರಶಸ್ತಿ ಪ್ರದಾನ : ಸೆಪ್ಟೆಂಬರ್ 8ರಂದು ಹೈದರಾಬಾದಿನಲ್ಲಿ ಶಿಲ್ಪ ಕಲಾವೇದಿಕೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಶಿವಮೊಗ್ಗದ ಜನ ಶಿಕ್ಷಣ ಸಂಸ್ಥೆಯ ಪರವಾಗಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಕರ್ನಾಟಕ ಪ್ರತಿನಿಧಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ವೈ ಅರುಣಾದೇವಿಯವರು ಮತ್ತು ಇತರರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.