ನಿಯಮ ಪಾಲಿಸದ ಸಚಿವರನ್ನು ಕಿತ್ತು ಹಾಕಿ :ಆರೆಸ್ಸೆಸ್
ವಾರದಲ್ಲಿ ಮೂರು ದಿನವಾದರೂ ವಿಧಾನ ಸೌಧದಲ್ಲಿ ಹಾಜರಾಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಪಕ್ಷದ ಸೂಚನೆ ಇದ್ದರೂ ಸಚಿವರು ಪಾಲಿಸದಿರುವುದಕ್ಕೆ ಸಂಘಪರಿವಾರ ಅತೃಪ್ತಿ ವ್ಯಕ್ತ ಪಡಿಸಿದೆ.
ತಿಂಗಳಿಗೊಮ್ಮೆ ವಿಧಾನಸೌಧಕ್ಕೆ ಬಾರದ ಸಚಿವರು ನಮ್ಮಲ್ಲಿದ್ದಾರೆ. ಇಲಾಖೆಯಲ್ಲಿ ಏನು ನಡೆಯುತ್ತಿದೆ, ಬಜೆಟ್ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆಯೇ ಎನ್ನುವುದನ್ನು ಪರಿಶೀಲಿಸಲು ಅವರಿಗೆ ಪುರುಸೊತ್ತಿಲ್ಲ. ಇಂತಹ ಸಚಿವರು ಸಾಧನೆಯಲ್ಲಿ ಹಿಂದೆ ಬಿದ್ದಿದ್ದಾರೆ. ಇವರು ತಮ್ಮ ಕಾರ್ಯಶೈಲಿ ಬದಲಿಸಿಕೊಳ್ಳದಿದ್ದಲ್ಲಿ ಮುಲಾಜಿಲ್ಲದೆ ಸಂಪುಟದಿಂದ ಕಿತ್ತು ಹಾಕಿ ಎಂದು ಸಂಘ ಪರಿವಾರದ ನಾಯಕರು ರಾಜ್ಯಾಧ್ಯಕ್ಷರಿಗೆ ತಾಕೀತು ಮಾಡಿದ್ದಾರೆ.
ಈಶ್ವರಪ್ಪ ಅಧಿಕಾರ ವಹಿಸಿಕೊಂಡ ನಂತರ ಹಲವು ಬಾರಿ ಈ ಮಾತು ಸಚಿವರಿಗೆ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದೆ. ಆದರೂ ಮತ್ರಿಗಳು ತಮ್ಮ ವರ್ತನೆ ತಿದ್ದಿಕೊಳ್ಳದಿರುವುದು ನಮಗೆ ಅತೃಪ್ತಿ ತಂದಿದೆ.
ತಮ್ಮ ಸಮಸ್ಯೆಗಳನ್ನು ಸಚಿವರಲ್ಲಿ ತೋಡಿಕೊಳ್ಳಲು ದೂರದ ಊರಿನಿಂದ ಜನರು ಬೆಂಗಳೂರಿಗೆ ಬರುತ್ತಾರೆ. ಸಚಿವರ ದರ್ಶನವಾಗದೆ ಬರೀಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಇದು ಸಂಘಪರಿವಾರದ ಗಮನಕ್ಕೆ ಬಂದಿದ್ದು ಈಶ್ವರಪ್ಪ ಮತ್ತು ಮುಖ್ಯಮಂತ್ರಿಗಳಿಗೆ ಅಗತ್ಯಕ್ರಮ ತೆಗೆದುಕೊಳ್ಳುವಂತೆ ಸಂಘ ಪರಿವಾರ ಸೂಚಿಸಿದೆ.