15 ಗಣಿಗಳಿಗೆ ಪರವಾನಿಗೆ : ಕಾಂಗ್ರೆಸ್ ಆರೋಪ
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿ ಎಸ್ ಉಗ್ರಪ್ಪ, ಕೆ ಸಿ ಕೊಂಡಯ್ಯ, ಗಣಿಗಾರಿಕೆಗೆ ಸರಕಾರ ನೀಡಿರುವ ಅನುಮತಿಯ ದಾಖಲೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. 2008ರ ಜೂನ್ 13ರಿಂದ 2009ರ ನವೆಂಬರ್ 6ರ ಅವಧಿಯಲ್ಲಿ 15 ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಭೂಮಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಕುಟುಂಬ ಮೈತ್ರಾ ಅಸೋಸಿಯೇಟ್ಸ್ ಹೆಸರಿನಲ್ಲಿ ಶಿವಮೂಗ್ಗದಲ್ಲಿ ನಿರ್ಮಿಸುತ್ತಿರುವ ಇಂಜಿನಿಯರಿಂಗ್ ಕಾಲೇಜು ಹಾಗೂ ಪಂಚತಾರಾ ಹೋಟೆಲ್ ಗಳಿಗೆ ಗಣಿ ಹಫ್ತಾದ ಕೋಟ್ಯಂತರ ರುಪಾಯಿ ಹಣ ಬಳಸುತ್ತಿದೆ. ಈ ಕಾಮಗಾರಿಗಳನ್ನು ಸಿಎಂ ಕುಟುಂಬ ನಿರ್ವಹಿಸುತ್ತಿದೆ. ಹಫ್ತಾದಲ್ಲಿ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಸಿಎಂಗೆ ಸಮಪಾಲು ಸಿಗುತ್ತಿದೆ. ಈ ಎಲ್ಲ ಅಕ್ರಮ ಬಯಲಿಗೆ ಬರುತ್ತದೆ ಎಂಬ ಕಾರಣದಿಂದ ಸಿಬಿಐ ತನಿಖೆಯಿಂದ ಹಿಂದೆ ಸರಿದಿದ್ದಾರೆ ಎಂದು ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಒಂದೇ ಒಂದು ಗಣಿ ಪರವಾನಿಗೆ ನೀಡಿಲ್ಲ. ಒಂದು ವೇಳೆ ನೀಡಿರುವುದನ್ನು ತೋರಿಸಿದರೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ದಾಖಲೆಗಳನ್ನು ಒದಗಿಸಿದ್ದೇವೆ. ಈಗ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವರೇ? ಎಂದು ಪ್ರಶ್ನಿಸಿದರು.
ಅಕ್ರಮ ಗಣಿಗಾರಿಕೆಯ ಆರೋಪ ಎದುರಿಸುತ್ತಿರುವ ಸಚಿವ ಜನಾರ್ದನ ರೆಡ್ಡಿಯವರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಿರುವುದು ಸಂಪೂರ್ಣ ನಾಟಕ. ಅಕ್ರಮ ಗಣಿಗಾರಿಕೆಯ ಹಣ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ಮುಖಂಡರಿಗೂ ಸಂದಾಯವಾಗುತ್ತಿದೆ. ಹೀಗಾಗಿ ರಾಜ್ಯ ಸರಕಾರ ಅಕ್ರಮ ಗಣಗಾರಿಕೆಗೆ ಬೆಂಬಲವಾಗಿ ನಿಂತಿದೆ ಎಂದು ಉಗ್ರಪ್ಪ ಕಿಡಿಕಾರಿದರು.