ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಮನೆ ತೆರವು
ಸರ್ವೇ ನಂ.120ರಲ್ಲಿ ಸುಮಾರು 49 ಜನ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಇದನ್ನು ಜಿಲ್ಲಾಡಳಿತ ಗಮನಿಸಿದ್ದಲ್ಲದೇ, ಮನೆಗಳಲ್ಲಿ ವಾಸವಾಗಿದ್ದ ಜನರಿಗಾಗಿ ನಿದಿಗೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ತಲಾ 4 ಲಕ್ಷ ರೂ.ಗಳ ಮೌಲ್ಯದಲ್ಲಿ 49 ಮನೆಗಳನ್ನು ನಿರ್ಮಿಸಿ ಸಂತ್ರಸ್ತ ಕುಟುಂಬಗಳನ್ನು ಅಲ್ಲಿಗೆ ವರ್ಗಾಯಿಸಿತು.
ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ನೇತೃತ್ವದ ತಂಡ ಇಂದು ಬೆಳಿಗ್ಗೆ ಸೋಗಾನೆಗೆ ಭೇಟಿ ನೀಡಿ, ಮನೆಗಳಲ್ಲಿ ವಾಸವಾಗಿದ್ದ ಜನರಿಗೆ ತಿಳಿಹೇಳಿದ್ದಲ್ಲದೇ, ಮನೆಗಳನ್ನು ಖಾಲಿ ಮಾಡಿಸಿತು. ಖಾಲಿಯಾದ ಮನೆಗಳನ್ನು ಪೋಕ್ಲೈನ್ಗಳ ಮೂಲಕ ಕೆಡವಿಹಾಕಿತು. ಸಾಮಾನು ಸರಂಜಾಮುಗಳನ್ನು ಮನೆಯಿಂದ ಹೊರಕ್ಕೆ ತೆಗೆದುಕೊಳ್ಳಲು ಅವಕಾಶ ನೀಡಿ, ನಂತರದಲ್ಲಿ ಈ ಸಾಮಾನು ಸರಂಜಾಮುಗಳನ್ನು ಜಿಲ್ಲಾಡಳಿತದ ವೆಚ್ಚದಲ್ಲಿಯೇ ನಿದಿಗೆಯ ಹೌಸಿಂಗ್ ಬೋರ್ಡ್ ಕಾಲೋನಿಗೆ ವರ್ಗಾಯಿಸಿತು.
ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಈ ತೆರವು ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಎಂ.ಎನ್.ವೈಶಾಲಿ, ಶಿವಮೊಗ್ಗ ತಹಶೀಲ್ದಾರ್ ಚಂದ್ರಶೇಖರ್, ಡಿವೈಎಸ್ಪಿ ಶೇಖರಪ್ಪ, ಕೋಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಸಂತಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.