ರಾಜ್ಯದಲ್ಲಿ ಕಾಮನ್ ವೆಲ್ತ್ ಕ್ವಿನ್ಸ್ ಬ್ಯಾಟನ್ ರಿಲೇ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಬಳಿಯಿರುವ ಕೆಕ್ಕನಹಳ್ಳಿ ಚೆಕ್ಪೋಸ್ಟ್ನಲ್ಲಿ ಕ್ವಿನ್ಸ್ ಬ್ಯಾಟನ್ ರಿಲೇಯನ್ನು ನೀಲಗಿರಿ ಜಿಲ್ಲೆ ಯ ಜಿಲ್ಲಾಧಿಕಾರಿ ಅರ್ಚನಾ ಪಟ್ನಾಯಕ್ ಅವರಿಂದ ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು ಸ್ವೀಕರಿಸಿದರು.
ನಂತರ ಅವರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಗೂಳೀಹಟ್ಟಿ ಶೇಖರ್ ಅವರಿಗೆ ಹಸ್ತಾಂತರಿಸಿದರು. ರಿಲೇ ಗಡಿಭಾಗಕ್ಕೆ ಪ್ರವೇಶಿದಾಗ ಪೂರ್ಣ ಕುಂಭ ಹಾಗೂ ಶಾಲಾ ಮಕ್ಕಳ ಸ್ವಾಗತದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ರಿಲೇ ಗಡಿ ಪ್ರವೇಶಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಜವಳಿ ಮತ್ತು ಕ್ರೀಡಾ ಸಚಿವ ಗೂಳೀಹಟ್ಟಿ ಶೇಖರ್, ಸೆ. 1 ರಿಂದ 7 ರವರೆಗೆ ಕ್ವಿನ್ಸ್ ಬ್ಯಾಟನ್ ರಿಲೇ ರಾಜ್ಯದಲ್ಲಿ ಸಂಚರಿಸಲಿದೆ ಎಂದರು. ರಿಲೇ ಸೆ. 2 ರಂದು ಬೆಂಗಳೂರು ತಲುಪಲಿದೆ.
ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು ಹಾಗೂ ರಾಜ್ಯದ ಕ್ರೀಡಾ ಪಟುಗಳು ರಿಲೇಯನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಸಿದ್ದತೆ ಮಾಡಲಾಗಿದೆ. ಅಂದು ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ರಾಜ್ಯದಲ್ಲಿ 7 ದಿನ ರಿಲೇ ಸಂಚರಿಸಲಿದ್ದು, ಇದರ ಅಂಗವಾಗಿ ಸರ್ಕಾರ ವಿವಿಧ ಕಾರ್ಯಕ್ರಮ ನಡೆಸಲು 35 ಲಕ್ಷ ರೂ. ವೆಚ್ಚ ಮಾಡುತ್ತ್ತಿದೆ. ಸೆ. 7 ರಂದು ಕಾರವಾರದ ಮೂಲಕ ಗೋವಾ ರಾಜ್ಯಕ್ಕೆ ಬೀಳ್ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎಂ. ಮುನಿರಾಜು, ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಪೆರುಮ್ಮಾಳ್, ನಿರ್ದೇಶಕ ಶಿವನಂಜಯ್ಯ ಅಪರ ಜಿಲ್ಲಾಧಿಕಾರಿ ನಾಗರಾಜು, ಗುಂಡ್ಲುಪೇಟೆ ತಾ. ಪಂ. ಅಧ್ಯಕ್ಷ ಜಯರಾಮು, ಉಪ ವಿಭಾಗಾಧಿಕಾರಿ ಪಿ. ಯೋಗೀಶ್, ಜಿ. ಪಂ. ಸಿಇಓ. ಕೆ. ಸುಂದರನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಎಎಸ್ಪಿ ಫಣೀಂದ್ರಸಿಂಗ್, ಡಿವೈಎಸ್ಪಿ ಬಸವರಾಜು ಸೇರಿದಂತೆ ಇತರ ಗಣ್ಯರು ಕ್ವಿನ್ಸ್ ಬ್ಯಾಟನ್ ತಂಡವನ್ನು ಸ್ವಾಗತಿಸಿದರು.