ಇವಿಎಂ ಕದ್ದವ ಚಿಕಾಗೋದಲ್ಲಿ ಉಪನ್ಯಾಸಕ
ಹೈದರಾಬಾದ್ ಮೂಲದ ಹರಿಪ್ರಸಾದ್ ಈಗ ವಿದ್ಯುನ್ಮಾನ ಮತಯಂತ್ರ ತಿರುಚುವಿಕೆ, ಅಕ್ರಮ ಕೃತ್ಯಗಳ ಬಗ್ಗೆ ಅಕ್ಟೋಬರ್ 5 ರಂದು ಉಪನ್ಯಾಸ ನೀಡಲಿದ್ದಾರೆ. ಇವರ ಜೊತೆಗೆ ಇನ್ನಿಬ್ಬರು ವಿದೇಶಿಯರು ಕೂಡಾ ಈ ವಿಷಯವಾಗಿ ಪ್ರಬಂಧ ಮಂಡಿಸಲಿದ್ದಾರೆ.
ಚಿಕಾಗೋದ 'ಕಂಪ್ಯೂಟರ್ ಅಂಡ್ ಕಮ್ಯೂನಿಕೇಷನ್ ಸೆಪ್ಟಿ' ಕುರಿತ ಸಮ್ಮೇಳನದಲ್ಲಿ 'Security Analysis of India"s Electronic Voting Machines' ಎಂಬ ವಿಷಯವನ್ನು ಹರಿಪ್ರಸಾದ್ ಮಂಡಿಸಲಿದ್ದಾರೆ. ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜರಾದ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಮುಂಬೈನ ಕಲೆಕ್ಟರ್ ಕಚೇರಿಯೊಂದರಿಂದ ಇವಿಎಂ ಕದ್ದ ಆರೋಪದ ಮೇಲೆ ವಿದ್ಯುನ್ಮಾನ ಸುರಕ್ಷತಾ ತಜ್ಞ ಹರಿಪ್ರಸಾದ್ ಅವರನ್ನು ಬಂಧಿಸಲಾಗಿತ್ತು. 25,000 ರು ಜಾಮೀನು ಹಣ ನೀಡಿ ಹೊರಬಂದ ಹರಿಪ್ರಸಾದ್ ರ ವಿದೇಶ ಪ್ರವಾಸಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.
ಭಾರತೀಯ ಚುನಾವಣಾ ಆಯೋಗದ ಅಧಿಕಾರಿ, ಸರ್ಕಾರಿ ಪ್ರತಿನಿಧಿಗಳಲ್ಲದೆ ಮೂರನೇ ವ್ಯಕ್ತಿಯೊಬ್ಬರು ಇವಿಎಂ ಬಗ್ಗೆ ಅದರಲ್ಲೂ ಇವಿಎಂನ ನ್ಯೂನ್ಯತೆ ಕಂಡು ಹಿಡಿದವರು ಉಪನ್ಯಾಸ ನೀಡುತ್ತಿರುವುದು ವಿಶೇಷವಾಗಿದೆ.