ಅದಿರು ರಫ್ತು : ಸರಕಾರಕ್ಕೆ ಹೈಕೋರ್ಟ್ ಛೀಮಾರಿ
ರಾಜ್ಯದ 10 ಬಂದರುಗಳಿಂದ ಅದಿರು ರಫ್ತು ಮಾಡಿ ನಿಷೇಧ ಹೊರಡಿಸಿರುವ ಆದೇಶ ಪ್ರಶ್ನಿಸಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ.ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಪ್ರಶ್ನೆಯನ್ನು ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರ ಮುಂದಿಟ್ಟಿದೆ.
ಅಕ್ರಮ ಅದಿರಿಗೆ ಸಂಬಂದಪಟ್ಟಂತೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದು, ಇನ್ನು ಆರು ತಿಂಗಳೊಳಗೆ ಅಂತಿಮ ವರದಿ ಹೊರಬೀಳುತ್ತದೆ. ಅಲ್ಲಿಯವರೆಗೆ ರಫ್ತು ನಿಷೇಧ ಮಾಡಬೇಕಾಗುತ್ತದೆ ಎಂದು ಹಾರ್ನಳ್ಳಿ ಅವರು ಹೇಳಿದ ಕಾರಣ, ಪೀಠ ಈ ರೀತಿ ಅಸಮಾಧಾನ ವ್ಯಕ್ತಪಡಿಸಿತು. ಎಲ್ಲ ಕೆಲಸಕ್ಕೂ ಲೋಕಾಯುಕ್ತರನ್ನೇ ಅವಲಂಬಿಸುತ್ತಿರಿ. ಸರಕಾರದ ನಡವಳಿಕೆ ಕಂಡರೆ ಯಾವುದೇ ಕೆಲಸ ನಿರ್ವಹಿಸಲು ಅಸಮರ್ಥವಾಗಿದೆ ಎಂದು ಒಪ್ಪಿಕೊಂಡಂತಿದೆ. ಸರಕಾರ ಮಾಡುವ ಕೆಲಸವನ್ನು ಲೋಕಾಯುಕ್ತರೇ ಮಾಡಲಿ ಎಂದರೆ ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಬೇಲೇಕೇರಿ ಬಂದರಿನಿಂದ 8 ಲಕ್ಷ ಟನ್ ಗಳಷ್ಟು ಬೃಹತ್ ಪ್ರಮಾಣದ ಅದಿರು ನಾಪತ್ತೆಯಾಗಿದ್ದರೂ ಇದನ್ನು ಪತ್ತೆ ಹಚ್ಚಲಾಗಲಿಲ್ಲ ಎಂದರೆ ಇದನ್ನು ನಮ್ಮಿಂದ ನಂಬಲು ಆಗುತ್ತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.