ಹಣದಾಸೆಗೆ ತನ್ನ ಮಕ್ಕಳನ್ನೇ ಕೊಚ್ಚಿದ ಬೆಪ್ಪ
ಕೋಲಾರ ಜಿಲ್ಲೆಯ ಶ್ಯಾನುಭೋಗನಹಳ್ಳಿಯ ನಿವಾಸಿ ಲಕ್ಷ್ಮಣ ನಾರಾಯಣಪ್ಪ(32) ಬಂಧಿತ ಆರೋಪಿ. ಬೈಯಪ್ಪನಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ಲಕ್ಷ್ಮಣ ಕಳೆದ ಮಾರ್ಚ್ 10 ರಂದು ತನ್ನ ಮಕ್ಕಳಾದ ನರಸಿಂಹಮೂರ್ತಿ(10) ಮತ್ತು ನಂದಿನಿ(6)ಯನ್ನು ನಾಯಕನಹಳ್ಳಿಯ ನೀಲಗಿರಿ ತೋಟಕ್ಕೆ ಕರೆದೊಯ್ದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ನಂತರ ತಲೆಮೆರೆಸಿಕೊಂಡಿದ್ದನು.
ತನಿಖೆ ಕೈಗೊಂಡ ಬೈಯಪ್ಪನಹಳ್ಳಿ ಪೊಲೀಸರು, ಲಕ್ಷ್ಮಣನ ಚಲನವಲನಗಳ ಮೇಲೆ ಅನುಮಾನಪಟ್ಟು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಡೆದು ಸುಮಾರು 6 ತಿಂಗಳ ನಂತರ ಆರೋಪಿ ಲಕ್ಷ್ಮಣ ಸೆರೆಸಿಕ್ಕದ್ದಾನೆ. ವಿಚಾರಣೆ ವೇಳೆ ತನ್ನ 9 ತಿಂಗಳ ಮಗು ರಘುವನ್ನು ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಘಟನೆ ಹಿನ್ನಲೆ: ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದ ಲಕ್ಷ್ಮಣ ದಿಢೀರ್ ಶ್ರೀಮಂತನಾಗುವ ದುರಾಸೆಯಿಂದ ಕಂಡ ಕಂಡ ದೇವರಲ್ಲಿ ನಿವೇದನೆ ಹಾಗೂ ಭವಿಷ್ಯಗಾರರ ಮೊರೆಹೊಕ್ಕಿದ್ದನು. ಒಂದು ದಿನ ಗಿಳಿಶಾಸ್ತ್ರ ಹೇಳುವ ವ್ಯಕ್ತಿ ಹತ್ತಿರ ಹೋಗಿ ತಾನು ಶ್ರೀಮಂತನಾಗುವ ಬಗ್ಗೆ ಗಿಳಿಶಾಸ್ತ್ರ ಕೇಳಿದ್ದಾನೆ.
ಗಿಳಿ ಒಂದು ಚೀಟಿಯನ್ನು ತೆಗೆದುಕೊಟ್ಟಿದೆ.ಇದರಂತೆ ನಿನ್ನ ಶ್ರೀಮಂತಿಕೆಗೆ ನಿನ್ನ ಮಕ್ಕಳೇ ಅಡ್ಡಿಯಾಗಿದ್ದಾರೆ. ಅವರು ನಿನಗೆ ಶನಿಯಾಗಿದ್ದಾರೆ.ಅವರು ಇಲ್ಲದಿದ್ದರೆ ನೀವು ಇಷ್ಟರಲ್ಲಿ ಶ್ರೀಮಂತನಾಗಿರುತ್ತಿದ್ದೆ ಎಂದು ಭವಿಷ್ಯ ಹೇಳಿದ್ದಾನೆ. ಇದನ್ನೇ ಮನಸ್ಸಿನಲ್ಲಿ ಇರಿಸಿಕೊಂಡ ಆರೋಪಿ ಲಕ್ಷ್ಮಣ ತನ್ನ ಹೆಂಡತಿ ಗಾಯತ್ರಿ ಇಲ್ಲದ ವೇಳೆ ಮೊದಲಿಗೆ ತನ್ನ ಕಿರಿಯ ಮಗ ರಘುವನ್ನು ಕೊಂದು ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಾನೆ.
ನಂತರ ಸಮಯ ಸಿಕ್ಕಾಗ ತನ್ನ ಇನ್ನಿಬ್ಬರು ಮಕ್ಕಳ ರುಂಡವನ್ನು ಚೆಂಡಾಡಿ ತಲೆ ಮರೆಸಿಕೊಂಡಿದ್ದನು. ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿದ್ದ ತಾಯಿ ಗಾಯತ್ರಿ ಪೊಲೀಸರ ಮೊರೆ ಹೋಗಿದ್ದಾರೆ. ಆಕೆ ನೀಡಿದ ದೂರಿನ ಅನ್ವಯ ಆರೋಪಿ ಲಕ್ಷ್ಮಣನನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.