ಹೊಸ ಇತಿಹಾಸ ಬರೆಯುತ್ತಿರುವ ಚಿತ್ರದುರ್ಗ
ದೇಶದಲ್ಲೇ ಪ್ರಥಮ ಎನ್ನಲಾದ ರಾಜ್ಯ ಮತ್ತು ಕೇಂದ್ರ ಸರಕಾರಿ ಯೋಜನೆಗಳ ಸುಸಜ್ಜಿತ ಮಾಹಿತಿ ಕೇಂದ್ರ ಆ. 26 ರಿಂದ ತನ್ನ ಸೇವೆಯನ್ನು ಐತಿಹಾಸಿಕ ಚಿತ್ರದುರ್ಗದಲ್ಲಿ ಆರಂಭಿಸಲಿದೆ. ಇದರ ರೂವಾರಿ ತಂತ್ರಜ್ಞ, ಭಾಜಪ ಲೋಕಸಭಾ ಸದಸ್ಯ ಜನಾರ್ದನಸ್ವಾಮಿ. ಅವರ ಈ ಕಲ್ಪನೆಯ ಕೂಸು ನಾಳೆ ಬುಧವಾರ ನಾಳೆ ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಆಗಲಿದೆ. ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವೆ ಅಗಾತಾ ಸಂಗ್ಮಾ ಅವರು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿಲಿದ್ದಾರೆ. ಸಂಗ್ಮಾ ಅವರು ಲೋಕಸಭೆಯ ಅತ್ಯಂತ ಕಿರಿಯ ಸಚಿವೆ ಆಗಿದ್ದಾರೆ.
ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಾಹಿತಿ ಕೇಂದ್ರಕ್ಕೆ ತಾಂತ್ರಿಕ ನೆರವು ನೀಡಿರುವ ಅಮೆರಿಕ ಸನ್ ಮೈಕ್ರೋಸಿಸ್ಟಮ್ಸ್ ಸಹಯೋಗದಲ್ಲಿ ಸ್ಟೇಡಿಯಂ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಜಿ ಕರುಣಾಕರರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ಮುಜರಾಯಿ ಸಚಿವ ಡಿ ಸುಧಾಕರ, ಯುವಜನ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿತ್ರದುರ್ಗ ಶಾಸಕ ಎಸ್ ಕೆ ಬಸವರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಜನಾರ್ದನಸ್ವಾಮಿ ಅವರು ಮಾಹಿತಿ ಕೇಂದ್ರದ ಬಗ್ಗೆ ವಿವರಣೆಗಳನ್ನು ನೀಡಲಿದ್ದಾರೆ.
ಏನಿದು ಮಾಹಿತಿ ಕೇಂದ್ರ : ಜನತೆ ಕೇವಲ ಒಂದೆರಡು ಯೋಜನೆಗಳ ಸಹಾಯ ಕೇಳಿ ನಮ್ಮ ಬಳಿ ಪದೇಪದೆ ಬರುತ್ತಿದ್ದರು. ಉಳಿದ ಯೋಜನೆಗಳ ಮಾಹಿತಿ, ಜ್ಞಾನ ಇರದ ಕಾರಣ ಅದರ ಬಗ್ಗೆ ನಮಗೆ ಕೇಳುತ್ತಿರಲಿಲ್ಲ. ಆ ಯೋಜನೆಯಲ್ಲಿ ನಮಗೆ ಹೇಗೆ ಸಹಾಯ ಆಗುತ್ತದೆ ಎನ್ನುತ್ತಿದ್ದರು. ಹೀಗಾಗಿ ಕೇಂದ್ರ-ರಾಜ್ಯ ಸರಕಾರಗಳ ಯೋಜನೆ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಕೇಂದ್ರ ರಾಜ್ಯ ಸರಕಾರಗಳ ಅದೆಷ್ಟೋ ಯೋಜನೆಗಳ ಮಾಹಿತಿ ಜನರಿಗೆ ಮಾತ್ರವಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ಹೀಗಾಗಿ ಯೋಜನೆಗಳು ಸಫಲತೆಗಿಂತ ವೈಫಲ್ಯದ ಹಾದಿ ಹಿಡಿದಿವೆ. ಯೋಜನೆಗೆ ಕಾಯ್ದಿರಿಸಿದ ಅನುದಾನ ಬಳಕೆಯಾಗದೆ ವಾಪಸ್ ಕೇಂದ್ರಕ್ಕೆ ಹೋಗುತ್ತಿದೆ. ನಿಮಗೆ ಯಾವ ಯೋಜನೆಗಳ ಬಗ್ಗೆ ಮಾಹಿತಿ ಬೇಕು ಹೇಳಿ.
ಇಡೀ ದೇಶದಲ್ಲೇ ಪ್ರಥಮ ಬಾರಿಗೆ 20 ಲಕ್ಷ ರುಪಾಯಿ ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಗಣಕೀಕೃತ ಮಾಹಿತಿ ಕೇಂದ್ರ ತಲೆ ಎತ್ತಲಿದೆ. ಸಂಸದ ಜನಾರ್ದನಸ್ವಾಮಿ ಅವರ ಸಲಹೆ ಸೂಚನೆಯೊಂದಿಗೆ ಮಾಹಿತಿ ಕೇಂದ್ರದ ಕನಸು ಜಿಲ್ಲಾಧಿಕಾರಿ ಆದಿತ್ಯಾ ಬಿಸ್ವಾಸ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಗೇಗೌಡರು ಸಾಕಾರಗೊಳಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಆಡಳಿತ ಕಚೇರಿ ಕಟ್ಟಡದ ಪಕ್ಕದಲ್ಲಿ ಸುಸಜ್ಜಿತ ಮಾಹಿತಿ ಕೇಂದ್ರ ಸ್ಥಾಪನೆಯಾಗಲಿದೆ. ಆ. 26ರಂದು ಮಾಹಿತಿ ಕೇಂದ್ರ ಜನಸಾಮಾನ್ಯರ ಸೇವೆಗೆ ಲಭ್ಯವಾಗಲಿದೆ. ಸಂಸದ ಜನಾರ್ದನಸ್ವಾಮಿ ಅಮೆರಿಕದಲ್ಲಿ ಸೇವೆ ಸಲ್ಲಿಸಿರುವ ಸನ್ ಮೈಕ್ರೋಸಿಸ್ಟಮ್ಸ್ ಕಂಪನಿಯೂ ಯೋಜನೆಗಳ ಮಾಹಿತಿಯನ್ನು ಕೇಂದ್ರದಲ್ಲಿ ಗಣಕೀಕರಿಸುವ ಜನಾಬ್ದಾರಿ ಹೊತ್ತುಕೊಂಡಿದೆ.
ಪ್ಲಾನಿಂಗ್ ಕೇಂದ್ರ : ಈ ಪ್ಲಾನಿಂಗ್ ಕೇಂದ್ರದಲ್ಲಿ ಮಹಿಳಾ, ಮಕ್ಕಳ, ವೃದ್ಧರ, ರೈತರ, ಕ್ರೀಡಾ-ಯುವಜನ ಸೇವೆ, ನಿರುದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದಕ್ಕೂ ವಿಭಾಗ. ಕೇಂದ್ರ ರಾಜ್ಯ ಸರಕಾರಗಳ ನೂರಾರು ಯೋಜನೆಗಳ ಪೂರ್ಣ ಮಾಹಿತಿ, ಕನ್ನಡ ಇಂಗ್ಲಿಷ್ ಭಾಷೆಯ ಕೈಪಿಡಿ ಅರ್ಜಿಗಳ ಲಭ್ಯ. ಯೋಜನೆ ಲಾಭ ಪಡೆಯುವ ಫಲಾನುಭವಿಗೆ ಅರ್ಜಿ ಜೊತೆಗೆ ಮಾರ್ಗದರ್ಶನ ನೀಡಲು 10 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆ ಸಾರ್ವಜನಿಕರ ಪ್ರಶ್ನೆಗಳಿಗೆ ಮಾಹಿತಿ ಉತ್ತಮ ನೀಡಲಿದೆ. ಹಳ್ಳಿ ಜನರಿಗೆ ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಜ್ಞಾನ ಕೂಡಾ ಸಿಗಲಿದೆ ಎನ್ನುತ್ತಾರೆ ಸಂಸದ ಜನಾರ್ದನಸ್ವಾಮಿ ಅವರು.