ಸಂಬಳ ಹೆಚ್ಚಳ ಏನೇನಕ್ಕೂ ಸಾಲದು :ಸಂಸದರು
ಸಂಬಳ ಹೆಚ್ಚಳ ಕುರಿತಂತೆ ಸಂಸತ್ತಿನ ತಜ್ಞರ ಸಮಿತಿ ನೀಡಿರುವ ಶಿಫಾರಿಸ್ಸಿನಂತೆ ಸಂಸದರಿಗೆ 80,001 ರು ಸಿಗಬೇಕು. ನಾವು ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಲಾಲೂ ಪ್ರಸಾದ್ ನೇತೃತ್ವದಲ್ಲಿ ಸಂಸದರು ಸ್ಪೀಕರ್ ಮೀರಾಕುಮಾರ್ ಅವರತ್ತ ತಿರುಗಿ ಕೂಗತೊಡಗಿದರು. ಸರ್ಕಾರಿ ಸೆಕ್ರೆಟ್ರಿಯೆಟ್ ಪಡೆವ ಸಂಬಳಕ್ಕಿಂತ ಒಂದು ರೂ ಹೆಚ್ಚಿಗೆ ಸಿಗಬೇಕು ಎಂಬುದು ಹಲವು ಸಂಸದರ ಒತ್ತಾಯವಾಗಿದೆ.
ಮೂಲ ಸಂಬಳದ ಹೊರತಾಗಿ ಅಧಿವೇಶನವಿರುವ ದಿನ ಪ್ರತಿದಿನ 1000ರು ಗಳ ಭತ್ಯೆಯನ್ನು ಸಂಸದರು ಪಡೆಯಲಿದ್ದಾರೆ. ಆದರೆ, ತುಟ್ಟಿ ಭತ್ಯೆ(ಡಿಎ )ಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ವಾರ್ಷಿಕ ವಿಮಾನಯಾನ ಸಂಖ್ಯೆಯನ್ನು 35 ರಿಂದ 50 ಕ್ಕೆ ಏರಿಸುವಂತೆ ಮಾಡಿದ್ದ ಪ್ರತ್ಯೇಕ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಕೈಬಿಟ್ಟಿದೆ.
ಸಾಂವಿಧಾನಿಕ ಭತ್ಯೆಯನ್ನು ಪ್ರತಿ ತಿಂಗಳಿಗೆ 20,000 ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು, ಕಚೇರಿ ನಿರ್ವಹಣಾ ವೆಚ್ಚ ಎಂದು 20 ಸಾವಿರ ಹೆಚ್ಚಿಗೆ ಬಳಸುವ ಅವಕಾಶ ಕಲ್ಪಿಸಲಾಗಿದೆ.
ಆರ್ ಜೆ ಡಿ, ಎಲ್ ಜೆಪಿ ಮುಂತಾದ ಪ್ರತಿಪಕ್ಷದವರು ಇಂದೇ ಭತ್ಯೆ ಹೆಚ್ಚಳದ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯ ಹೇರಿದ್ದರಿಂದ, ಸೋಮವಾರಕ್ಕೆ ಮುಂದೂಡಿದ್ದ ಸಂಪುಟ ನಿರ್ಧಾರವನ್ನು ಇಂದೇ ಪ್ರಕಟಿಸಲಾಯಿತು.