ಸಾಲ ತೀರಿಸಲು ಹೆತ್ತ ಮಗು ಮಾರಾಟ
ಘಟನೆ ವಿವರ: ಕಂಕನಾಡಿ ಆಸ್ಪತ್ರೆಯಲ್ಲಿ ಜೂ.26 ಕ್ಕೆ ತನ್ನ ಪತ್ನಿ ರೆಹಮತ್ ಹೆಣ್ಣು ಮಗು ಹುಟ್ಟಿದಾಗ, ಎಲ್ಲರಂತೆ ಷಮೀರ್ ಕೂಡಾ ಸಂತೋಷದಿಂದ ಮಗುವನ್ನು ಎತ್ತಿ ಮುದ್ದಾಡಿದ್ದ.ಆಸ್ಪತ್ರೆಯಿಂದ ಡಿಸ್ ಚಾರ್ಚ್ ಆದ ತಕ್ಷಣ ರೆಹಮತ್ ಳನ್ನು ಮಗುವನ್ನು ಕೊಡುವಂತೆ ಷಮೀರ್ ಕೇಳಿದಾಗ, ಆಕೆಗೆ ಏಕೋ ಅನುಮಾನ ಹುಟ್ಟಿ, ತನ್ನ ಬಳಿಯೇ ಇರಲಿ ಎಂದಿದ್ದಾಳೆ.
ಆದರೆ, ಮಗು ಹುಟ್ಟುವುದಕ್ಕೆ ಮುಂಚೆಯೇ ಮಾರಾಟದ ಡೀಲ್ ಮುಗಿಸಿಕೊಂಡಿದ್ದ ಷಮೀರ್, ಒಪ್ಪಂದದ್ದಂತೆ ಮಗುವನ್ನು ನೀಡಲು ಮುಂದಾಗಿದ್ದಾನೆ. ತನ್ನ ಪತ್ನಿ ಬಳಿ ಇದ್ದ ಮಗುವನ್ನು ಕಸಿದುಕೊಂಡು ಕಾಸರಗೋಡಿನ ಅಬ್ದು ಲ್ ಖಾದೀರ್ ಎಂಬುವವನಿಗೆ ಮಾರಾಟ ಮಾಡಿದ್ದಾನೆ.
ಸಿಕ್ಕಿಬಿದ್ದ ಪಾಪಿ ಪಿತ: ಪಣಂಬೂರು ಪೊಲೀಸ್ ಠಾಣೆಯಲ್ಲಿ ಮಗು ಕಳ್ಳತನದ ಸಂಬಂಧ ರಹಮತ್ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಎಸಿಪಿ ಸೀಮಂತ್ ಕುಮಾರ್ ಅವರಿದ್ದ ಪೊಲೀಸ್ ತಂಡ ಮಗುವಿನ ತಂದೆ ಷಮೀರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ನಂತರ ಪೊಲೀಸರೆದುರು ಬಾಯ್ಬಿಟ್ಟ ಷಮೀರ್, ತನ್ನ ಮಗುವನ್ನು ಮಾರಾಟ ಮಾಡಲು ಬದ್ರುದ್ದೀನ್ ಎಂಬುವನ ಸಹಾಯ ಪಡೆದಿದ್ದೆ. ಅಬ್ದುಲ್ ಖಾದೀರ್ ಇಂದ ನನಗೆ ಮೊದಲ ಮೊತ್ತವಾಗಿ 35 ಸಾವಿರ ಸಿಕ್ಕಿದೆ. ಇನ್ನೂ 50 ಸಾವಿರ ರು ನಂತರ ನೀಡುವ ಭರವಸೆ ನೀಡಿದ್ದ ಎಂದಿದ್ದಾನೆ.
ಕಾಸರಗೋಡಿನ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ. ನಾನು ತುಂಬಾ ಸಾಲ ಮಾಡಿದ್ದೆ. ಅದನ್ನು ತೀರಸಲು ನನಗಿದ್ದ ಮಾರ್ಗ ಇದೊಂದೆ. ಮಗು ಹುಟ್ಟ್ಟುವ ಮೊದಲೇ ಈ ಒಪ್ಪಂದವಾಗಿತ್ತು. ಅದರಂತೆ, ಅವರಿಗೆ ಮಗು ನೀಡಿ, ಹಣ ಪಡೆದೆ ಎಂದಿದ್ದಾನೆ.
ಷಮೀರ್ ಹಾಗೂ ರಹಮಾತ್ ಮದುವೆಯಾಗಿ ಸುಮಾರು 13 ವರ್ಷಗಳು ಕಳೆದಿದ್ದು, ಇದು ಇವರ ಎರಡನೇ ಮಗುವಾಗಿದೆ. ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಕೈಯಲ್ಲಿ ಕಾಸಿರಲಿಲ್ಲ ಎಂದು ತಿಳಿದುಬಂದಿದೆ.
ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆ 363-368, 34 ಮತ್ತು 23 ಸೆಕ್ಷನ್ ಗಳ ಅಡಿಯಲ್ಲಿ ಹಾಗೂ Juvenile Justice Act 2000ರ ಅನ್ವಯ ಕೇಸು ದಾಖಲಿಸಲಾಗಿದೆ.