1 ರೂಗೆ ಮರ್ಸಿಡಿಸ್ ಬೆಂಜ್ ಬಸ್ ನಲ್ಲಿ ಓಡಾಡಿ
ಬುಧವಾರ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಮರ್ಸಿಡಿಸ್ ಬೆಂಜ್ ಸಂಸ್ಥೆ ಈ ಬಸ್ಸುಗಳನ್ನು ಮೂರು ತಿಂಗಳಕಾಲ ಉಚಿತವಾಗಿ ಬೆಂಗಳೂರು ನಗರ ಸಾರಿಗೆ ಸಂಸ್ಥೆಗೆ ನೀಡುತ್ತಿದ್ದು, ಇವುಗಳ ಉಪಯುಕ್ತತೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಆಧರಿಸಿ ಈ ಮಾದರಿಯ ಬಸ್ಸುಗಳನ್ನು ಖರೀದಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ಡೈಲಿಪಾಸ್ಗಳ ಮರುಮಾರಾಟ ಜಾಲ ಸೃಷ್ಟಿಯಾಗಿ ಅದರಲ್ಲೂ ಹೊಸಕೋಟೆ, ಆನೇಕಲ್ ನೆಲಮಂಗಲದಲ್ಲಿ ಇದು ಹೆಚ್ಚಾಗಿದ್ದ ಕಾರಣ ಗುರುತಿನ ಕಾರ್ಡುಗಳನ್ನು ಬಳಕೆಗೆ ತರಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಹಾಲಿ ನಗರದಲ್ಲಿ ಸಂಚರಿಸುವ ವೊಲ್ವೋ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು. ಆರಂಭಿಕವಾಗಿ ವಿಮಾನನಿಲ್ದಾಣದಿಂದ ಸಂಚರಿಸುವ ಒಂದು ಬಸ್ಸಿನಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತದೆಂದು ಸಚಿವರು ತಿಳಿಸಿದರು.
ಪರಿಸರ ಸ್ನೇಹಿ ಇಲಾಖೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಡೀಸೆಲ್ ಜೊತೆಗೆ ಎಥನಾಲ್ ಬಳಕೆ ಬಗ್ಗೆ ಮಾತನಾಡುತ್ತಾ ಮೈಸೂರು, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಡಿಪೋಗಳ 1200 ಬಸ್ಸುಗಳಲ್ಲಿ ಶೇ.7.7 ರಷ್ಟು ಎಥನಾಲ್ ಬಳಕೆ ಮಾಡಲಾಗುತ್ತಿದ್ದು ಇಂಧನ ಉಳಿತಾಯವಾಗುತ್ತಿದೆ.
ಎಥನಾಲ್ ಉಪಯೋಗದಿಂದ ವಾಯು ಮಾಲಿನ್ಯವು ಕಡಿಮೆಯಾಗಲಿದೆ. ಎಥನಾಲ್ ಬಳಕೆಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಕಳೆದ ವರ್ಷ 11 ಲಕ್ಷ ಲೀಟರ್ ಎಥನಾಲ್ ಉಪಯೋಗಿಸಲಾಗಿತ್ತು.
ಪ್ರಸಕ್ತ ವರ್ಷದಲ್ಲಿ 40 ಲಕ್ಷ ಲೀಟರ್ ಎಥನಾಲ್ ಖರೀದಿಸಲು ಟೆಂಡರ್ ಕರೆಯಲಾಗಿದೆ ಎಂದರು. ಸಾರಿಗೆ ವೆಚ್ಚ ಹೊರತುಪಡಿಸಿದಲ್ಲಿ ಒಂದು ಲೀಟರ್ ಎಥನಾಲ್ ಬೆಲೆ 18.40 ರೂ. ಎಥನಾಲ್ ಕಬ್ಬಿನಿಂದ ಉತ್ಪತ್ತಿಮಾಡಲಾಗುವುದರಿಂದ ಕಬ್ಬಿನ ಬೆಳೆಗಾರರಿಗೆ ಬಹಳ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.