ಹಲಸೂರಿನಲ್ಲಿ ಮೂವರಿಗೆ ಚೂರಿ ಇರಿತ
ಉತ್ಸವ ಪ್ರಚಾರಕ್ಕಾಗಿ ಕರಪತ್ರ ಹೊರಡಿಸುವುದು ವಾಡಿಕೆ. ಆದರೆ, ಗೆಳೆಯರ ಬಳಗ ಮುದ್ರಿಸಿದ ಕರಪತ್ರದಲ್ಲಿ ತನ್ನ ಹೆಸರು ಮತ್ತು ಭಾವಚಿತ್ರ ಮುದ್ರಿತವಾಗಿಲ್ಲ ಎಂದು ತಗಾದೆ ತೆಗೆದ ಸರವಣ ಎಂಬಾತ ಸೋಮವಾರ ರಾತ್ರಿ ಸಿಟ್ಟಿಗೆದ್ದು ಕುಡಿದುಕೊಂಡು ಬಂದು ಮೂವರಿಗೆ ಚೂರು ಹಾಕಿದ.
ದೊಮ್ಮಲೂರು ಲೇಔಟಿನ ಗೌತಮ್ ಕಾಲೋನಿಯ ಶಂಕರ, ವೇಲು ಮತ್ತು ಶಿವು ಎಂಬುವವರು ಹಲ್ಲೆಗೆ ಒಳಗಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆ ಆಗಿರು ಸರವಣನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರದಲ್ಲಿ 3,500 ಕ್ಕೂ ಹೆಚ್ಚು ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮಗಳು ವ್ಯವಸ್ಥೆಯಾಗುತ್ತದೆ. 4x4 ಅಡಿ ಜಾಗದಲ್ಲಿ ತಲೆಯೆತ್ತುವ ಗೆಳೆಯರ ಬಳಗದ ಸಿದ್ಧಿವಿನಾಯಕ ಉತ್ಸವಗಳಿಂದ ಮೊದಲಾಗಿ 400x400 ಚದರ ಅಡಿ ಪ್ರದೇಶದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗುವ ಉತ್ಸವಗಳು ಜರಗುತ್ತವೆ. ಆಟದ ಮೈದಾನ, ಖಾಲಿ ನಿವೇಶನ, ವಠಾರಗಳು, ಮತ್ತೆಲ್ಲೂ ಜಾಗಸಿಗದಿದ್ದರೆ ಮುಖ್ಯರಸ್ತೆಯ ಮಧ್ಯದಲ್ಲೇ ತಲೆಯೆತ್ತುವ ಶಾಮಿಯಾನಗಳಲ್ಲಿ ಗಣೇಶ ವಿರಾಜಮಾನನಾಗುತ್ತಾನೆ.
ಬುದ್ದಿ ವಿನಾಯಕನ ಉತ್ಸವ ಸಮಿತಿಯಲ್ಲಿ ತಾನೂ ಒಬ್ಬನಾಗಬೇಕೆನ್ನುವುದು ಅನೇಕ ಯುವಕರ ಆಸೆ. ಕೆಲವರಿಗೆ ಭಕ್ತಿ, ಕೆಲವರಿಗೆ ಧಾರ್ಮಿಕ ಸಂಭ್ರಮ, ಹಲವರಿಗೆ ತಮ್ಮ ಬಡಾವಣೆಯಲ್ಲಿ ಸ್ವಪ್ರತಿಷ್ಠೆಯ ಪ್ರಶ್ನೆ, ಇನ್ನು ಕೆಲವರಿಗೆ ಸಾರ್ವಜನಿಕರಿಂದ ಹಣವಸೂಲಿ ಮಾಡುವ ಹುನ್ನಾರ. ಈ ಬಾರಿ ಸ್ವರ್ಣಗೌರಿ ವ್ರತ ಸೆಪ್ಟೆಂಬರ್ 10ರ ಶುಕ್ರವಾರ ಬಂದರೆ ಮೂಷಿಕ ವಾಹನ ಗಣೇಶ ಶನಿವಾರ 11 ರಂದು ಭೂಲೋಕಕ್ಕೆ ಬರುತ್ತಾನೆ.