ಸಂಸತ್ತಿಗೆ ಓಣಂ ರಜೆ, ಮಲ್ಲು ಲಾಬಿಗೆ ಜಯ
ಆಗಸ್ಟ್ 23 ರಂದು ಓಣಂ ಹಬ್ಬದ ಪ್ರಯುಕ್ತ ಸಂಸತ್ ರಜೆ ಘೋಷಣೆ ಮಾಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪಿ ಕೆ ಬನ್ಸಾಲ್ ಪ್ರಕಟಿಸಿದ್ದಾರೆ. ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಂದು ಸಂಸತ್ತಿನ ಕಾರ್ಯಕಲಾಪಗಳು ನಡೆಯುವುದಿಲ್ಲ. ಸಂಸದರ ಗೌರವಧನಕ್ಕೆ ಸಂಬಂಧಿಸಿದ ವಿಧೇಯಕವನ್ನು ಶನಿವಾರವೇ ಮಂಡಿಸಲಾಗುತ್ತದೆ.
ದೇಶದಲ್ಲಿ ಬೇಕಾದಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಇವೆ. ಪ್ರತಿ ರಾಜ್ಯಗಳು ಆಯಾ ನಾಡು, ನುಡಿ, ಭಾಷೆಗೆ ತಕ್ಕಂತೆ ಹಬ್ಬ ಹರಿದಿನಗಳನ್ನು ಆಚರಿಸುತ್ತವೆ. ಕರ್ನಾಟಕದಲ್ಲಿ ಯುಗಾದಿ, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬಗಳ ಆಯಾ ರಾಜ್ಯಗಳಲ್ಲಿ ಬಹುದೊಡ್ಡ ಪ್ರಾದೇಶಿಕ ಹಬ್ಬಗಳಾಗಿವೆ. ಆದರೆ, ಈ ಹಬ್ಬಗಳಿಗೆ ರಾಜ್ಯ ಸರಕಾರಗಳು ಸರಕಾರಿ ರಜೆ ಘೋಷಿಸುತ್ತವೆ.
ಇದರಂತೆ ಓಣಂ ಕೂಡಾ ಕೇರಳಕ್ಕೆ ಸೀಮಿತವಾದ ಪ್ರಾದೇಶಿಕ ಹಬ್ಬ. ಹೀಗಿದ್ದಾಗಲೂ ಕೇಂದ್ರ ಸರಕಾರ ಓಣಂ ಹಬ್ಬಕ್ಕೆ ಸಂಸತ್ ರಜೆ ಘೋಷಣೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯುಗಾದಿಗೂ, ಪೊಂಗಲ್ ಗೂ ಸಂಸತ್ ರಜೆ ಘೋಷಣೆಯನ್ನು ಏಕೆ ಮಾಡಬಾರದು ಎನ್ನುವ ಪ್ರಶ್ನೆ ಏಳುವುದು ಸಹಜ.
ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಅವರದೆ ಆದ ಪ್ರಾದೇಶಿಕ ದೊಡ್ಡದೊಡ್ಡ ಹಬ್ಬಗಳಿವೆ. ನಮ್ಮ ಯುಗಾದಿ ಹಬ್ಬಕ್ಕೂ ರಜೆ ಏಕೆ ಘೋಷಿಸಬಾರದು ಎಂದು ಕರ್ನಾಟಕ ಸಂಸತ್ ಸದಸ್ಯರು ಕೇಳುತ್ತಾ ಕುಳಿತರೆ ಚರ್ಚೆಗೆ ಕೊನೆ ಎಲ್ಲಿದೆ.
ಕ್ರಿಶ್ಚಿಯನ್ನರಿಗೆ ಕ್ರಿಸ್ ಮಸ್, ಮುಸ್ಲಿಮರಿಗೆ ರಂಜಾನ್ ರಜೆ ಘೋಷಿಸುವ ಕೇಂದ್ರ ಸರಕಾರ ಆಯಾ ಪ್ರಾದೇಶಿಕ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳಿಗೆ ರಜೆ ನೀಡಬೇಕು. ಕೇಂದ್ರ ಸರಕಾರ ತೆಗೆದುಕೊಂಡಿರುವ ಈ ತೀರ್ಮಾನ ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಓಣಂ ಪ್ರಾದೇಶಿಕ ಹಬ್ಬ, ಅಲ್ಲಿನ ರಾಜ್ಯ ಸರಕಾರ ರಜೆ ನೀಡುತ್ತದೆ. ಇದು ರಾಷ್ಟ್ರೀಯ ಹಬ್ಬವಾಗಬೇಕೆ ಎನ್ನುವುದನ್ನು ಕೇಂದ್ರ ಮತ್ತೊಮ್ಮೆ ಯೋಚಿಸಬೇಕು. ಈ ಹಿಂದೆ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಗಣೇಶ್ ಹಬ್ಬವನ್ನು ರಾಷ್ಟ್ರೀಯ ಹಬ್ಬ ಎಂದು ಘೋಷಿಸಿ ಎಂದು ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಠಾಕ್ರೆ ಎತ್ತಿದ ವಿಷಯ ಇಡೀ ದೇಶದ ಗಮನ ಸೆಳೆದಿತ್ತು.