ನಾಗರಿಕ ಅಣು ಒಪ್ಪಂದಕ್ಕೆ ಬಿಜೆಪಿ ಬೆಂಬಲ
ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಒಪ್ಪಂದವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಯಶವಂತ್ ಸಿನ್ಹಾ ಅವರು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಲಿದ್ದಾರೆ.
ಬಿಜೆಪಿಯ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪಾರ್ಲಿಮೆಂಟಿನಲ್ಲಿ ಬಿಲ್ ಮಂಡನೆಯಾದ ನಂತರ ಭಾರತಕ್ಕೆ ಈ ವರ್ಷದ ನವೆಂಬರ್ ತಿಂಗಳಲ್ಲಿ ಬರಲಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಮುಂದೆಯೂ ಮಂಡಿಸಲು ತೀರ್ಮಾನಿಸಿದೆ.
ಸಂಸತ್ತಿನಲ್ಲಿ ಸರ್ವಪಕ್ಷಗಳಿಂದ ನಾಗರಿಕ ಅಣು ಒಪ್ಪಂದಕ್ಕೆ ಸಹಮತ ದೊರೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯೀ ಸಮಿತಿ ಅಧ್ಯಕ್ಷ ಟಿ ಸುಬ್ಬಿರಾಮಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಿಲ್ಲಿನ ಅಧ್ಯಯನ ನಡೆಸಿರುವ ಸಮಿತಿ ಕೆಲ ತಿದ್ದುಪಡಿಗಳನ್ನು ಹೇಳಿದೆ. ಬಿಜೆಪಿ ತಿಳಿಸಿರುವ ಕೆಲ ಬೇಡಿಕೆಗಳ ಕುರಿತಾಗಿಯೂ ನಿಗಾ ವಹಿಸುವುದಾಗಿ ಯುಪಿಎ ಸರಕಾರ ಆಶ್ವಾಸನೆ ನೀಡಿದೆ. ಇದಕ್ಕೆ ಪ್ರತಿಯಾಗಿ ಬಿಲ್ ಮಂಡನೆಗೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಭೋಪಾಲ್ ದುರಂತದಂತೆ ಅಣು ವಿಕಿರಣ ದುರಂತ ಸಂಭವಿಸಿದಲ್ಲಿ ಪರಿಹಾರ ಧನವನ್ನು ಹೆಚ್ಚಿಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಇದಕ್ಕೆ ಸಮ್ಮತಿಸಿದ ಸರಕಾರ ಪರಿಹಾರ ಧನವನ್ನು 500 ಕೋಟಿ ರು.ಯಿಂದ 1500 ಕೋಟಿ ರು.ಗೆ ಏರಿಸಿದೆ. ಇದನ್ನು 10 ಸಾವಿರ ಕೋಟಿ ರು.ಗೆ ಏರಿಸಬೇಕೆಂದು ಎಡಪಕ್ಷಗಳು ಪಟ್ಟುಹಿಡಿದಿವೆ.