ಪ್ರಿಯಾಂಕಾ ಕೊಲೆ : ಸತೀಶ್ ಕುಟುಂಬ ಭಾಗಿ?
ಈ ಅನುಮಾನ ಪೊಲೀಸರನ್ನು ಬಲವಾಗಿ ಕಾಡತೊಡಗಿದ್ದು, ಇದಕ್ಕೆ ಕಾರಣ ಕುಟುಂಬ ಸದಸ್ಯರ ವರ್ತನೆ ಎನ್ನಲಾಗಿದೆ. ಹತ್ಯೆ ಹಿಂದೆ ಪ್ರಿಯಾಂಕಾ ಪತಿ ಸತೀಶ್ ಕುಮಾರ್ ಅವರ ಕೈವಾಡವಿರುವುದನ್ನು ಖಚಿತಪಡಿಸಿಕೊಂಡಿರುವ ಪೊಲೀಸರು ಗುರುವಾರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಇದನ್ನು ದೃಢೀಕರಿಸಲು ಅಗತ್ಯ ಸಾಕ್ಷಿ ಕಲೆ ಹಾಕುವ ಜವಾಬ್ದಾರಿ ಪೊಲೀಸರ ಮೇಲಿತ್ತು. ಆದರೆ, ಈ ಸಂದರ್ಭದಲ್ಲಿ ಪೊಲೀಸರು ಬೆಚ್ಚಿಬೀಳುವ ರೀತಿಯ ಅಸ್ತ್ರವೊಂದನ್ನು ಸತೀಶ್ ಕುಮಾರ್ ಸಂಬಂಧಿಗಳು ಪ್ರಯೋಗಿಸಿದರು, ಅದು ಹೇಬಿಯಸ್ ಕಾರ್ಪಸ್ ಅರ್ಜಿ.
ಹೀಗಾಗಿ, ಅನಿವಾರ್ಯವಾಗಿ ಪೊಲೀಸರು ಸತೀಶ್ ಕುಮಾರ್ ನನ್ನು ಶುಕ್ರವಾರ ನ್ಯಾಯಾಲಯಕ್ಕೆ ಒಪ್ಪಿಸಬೇಕಾಯಿತು. ನಂತರ ಆತನನ್ನು ಎಂಟು ದಿನಗಳ ಕಾಲ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ದಿನಕ್ಕೊಂದು ಕತೆ ಹೇಳಿ ತನಿಖೆಗೆ ದಾರಿ ತಪ್ಪಿಸುತ್ತಿದ್ದಾನೆ. ಆರಂಭದಲ್ಲಿ ಕೊಲೆಯನ್ನು ಒಪ್ಪಿಕೊಂಡ ಆತ ತಂದೆತಾಯಿಗೆ ಕಿರುಕುಳ ನೀಡುತ್ತಿದ್ದಳು ಎಂಬ ಕಾರಣ ನೀಡಿದ ನಂತರ ಮಾನಸಿಕ ಹಿಂಸೆ ನೀಡುತ್ತಿದ್ದಳು ಎಂಬ ಕಾರಣ ನೀಡಿದ್ದ.
ಆದರೆ, ತನಿಖೆ ನಡೆಸುತ್ತಿರುವ ಪೊಲೀಸರು ಈಗ ಪ್ರಕರಣದಲ್ಲಿ ಅನೈತಿಕ ಸಂಬಂಧದ ವಾಸನೆ ಕಂಡು ಹಿಡಿದಿದ್ದಾರೆ. ಸಾಲದ್ದಕ್ಕೆ ಈ ಕೊಲೆ ಹಿಂದೆ ಆತನ ಕುಟುಂಬ ಸದಸ್ಯರ ಕೈವಾಡವಿದೆ ಎನ್ನುವ ಅಂಶವನ್ನೂ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೊಲೆ ನಡೆದ ದಿನ ಮನೆಯಿಂದ ಸತೀಶ್ ಕುಮಾರ್ ಅಪಹರಿಸಿದ 2 ಲಕ್ಷ ರುಪಾಯಿ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲು ತಂಡ ರಚಿಸಲಾಗಿದ್ದು, ಇನ್ನೂ 6 ದಿನದೊಳಗೆ ಪ್ರಕರಣದಲ್ಲಿ ಏನೇನು ನಡೆದಿದೆ ಎಂಬುದನ್ನು ಬಯಲುಗೊಳಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.