ಉಮರ್ ಅಬ್ಧುಲ್ಲಾ ಮೇಲೆ ಬೂಟು ಎಸೆತ
ಕ್ರಿಮಿನಲ್ ಪ್ರಕರಣದ ಆರೋಪದ ಮೇಲೆ ಅಮಾನತುಗೊಂಡಿರುವ ಮುಖ್ಯಪೇದೆ ಅಬ್ಧುಲ್ ಅಹದ್ ಜಾನ್ ಮುಖ್ಯಮಂತ್ರಿ ಮೇಲೆ ಬೂಟು ಎಸೆದ ಭೂಪ. ಇಲ್ಲಿನ ಭಕ್ಷಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೆ, ಮುಖ್ಯಪೇದೆ ಅಬ್ಧುಲ್ ಅಹದ್ ಜಾನ್, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಗಣ್ಯರ ವೇದಿಕೆಯ ಹಿಂಭಾಗದಲ್ಲಿ ಬಂದು ಕುಳಿತಿದ್ದ. ಸಮಾರಂಭ ಆರಂಭವಾಗುತ್ತಿದ್ದಂತೆಯೇ ಎದ್ದು ನಿಂತ ಜಾನ್, ನಮಗೆ ಸ್ವಾತಂತ್ರ್ಯ ಬೇಕು ಎಂದು ಮುಖ್ಯಮಂತ್ರಿ ಕಡೆಗೆ ಬೂಟು ಎಸೆದ. ಆದರೆ, ಅದು ಮುಖ್ಯಮಂತ್ರಿ ಅವರಿಗೆ ತಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭಾಷಣದಲ್ಲಿ ಈ ಘಟನೆ ಪ್ರಸ್ತಾಪಿಸಿದ ಉಮರ್, ಪ್ರತಿಭಟನೆ ವ್ಯಕ್ತಪಡಿಸುವ ಉತ್ತಮ ಮಾರ್ಗವಿದೆ. ಘೋಷಣೆಗಳನ್ನು ಕೂಗಿ, ಬೂಟು ಎಸೆಯಿರಿ, ಕಲ್ಲುಗಳನ್ನು ಮಾತ್ರ ತೂರಬೇಡಿ ಎಂದರು. ಆರೋಪಿ ಪೇದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅಪರಾಧ ಸಂಬಂಧ ಪ್ರಕರಣದ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.