ಪತ್ನಿಯನ್ನ ಕೊಂದದ್ದು ಇನ್ಫಿ ಉದ್ಯೋಗಿಯೇ!
ಪೋಷಕರು ಮತ್ತು ಪತ್ನಿ ನಡುವೆ ಮನಸ್ತಾಪವಿದ್ದ ಕಾರಣ ಪತ್ನಿಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಸತೀಶ್ ತಪ್ಪೊಪ್ಪಿಕೊಂಡಿದ್ದಾನೆ. ಪತಿಯ ಪೋಷಕರು ಮನೆಗೆ ಬರುವುದು ಪ್ರಿಯಾಂಕಾ ಅವರಿಗೆ ಇಷ್ಟವಿರಲಿಲ್ಲ. ಜೊತೆಗೆ ಸಂಬಳದ ಹಣವನ್ನು ಪೋಷಕರಿಗೆ ನೀಡದಂತೆ ಅವರು ಪತಿಗೆ ತಾಕೀತು ಮಾಡಿದ್ದರು. ಪತಿಯ ಪುರುಷತ್ವದ ಬಗ್ಗೆಯೂ ಪ್ರಿಯಾಂಕಾ ವ್ಯಂಗ್ಯವಾಡುತ್ತಿದ್ದರು. ಈ ಎಲ್ಲ ಕಾರಣಗಳಿಂದ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಸತೀಶ್ ಪೊಲೀಸರಿಗೆ ತಿಳಿಸಿದ್ದಾರೆ.
ಕಣ್ಣುಮಚ್ಚಾಲೆ ಆಟವಾಡುವ ನೆಪದಲ್ಲಿ ಆತ ಪತ್ನಿಯ ಕಣ್ಣಿಗೆ ಮೊದಲು ಕರವಸ್ತ್ರ ಕಟ್ಟಿದ್ದಾನೆ. ಅಲ್ಲದೇ ದರೋಡೆಕೋರರು ಮನೆಗೆ ಬಂದಂತೆ ಪತ್ನಿಗೆ ಉಹಿಸಿಕೊಳ್ಳಲು ಹೇಳಿದ ಆತ. ಅವರ ಕೈಗಳಿಗೆ ಹಗ್ಗ ಕಟ್ಟಿದ್ದಾನೆ. ನಂತರ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಅವರನ್ನು ಕುರ್ಚಿಗೆ ಕಟ್ಟಿ ಹಾಕಿ ಚಾಕುವಿನಿಂದ ಕತ್ತು ಸೀಳಿದ್ದಾನೆ ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಆತ ಹೇಳಿಕೆ ನೀಡಿದ್ದಂತೆ ಮನೆಯಿಂದ ಹಣ ಮತ್ತು ಆಭರಣಗಳು ಸಹ ಕಳುವಾಗಿರಲಿಲ್ಲ. ತನಿಖೆಯ ದಿಕ್ಕು ತಪ್ಪಿಸುವ ಕಾರಣಕ್ಕಾಗಿ ಆತ ಈ ರೀತಿ ಸುಳ್ಳು ಹೇಳಿದ್ದ. ಈ ಕೃತ್ಯಕ್ಕೆ ಆರೋಪಿ ಬೇರೆಯವರ ನೆರವು ಪಡೆದಿರುವ ಸಾಧ್ಯತೆ ಕಡಿಮೆ. ಆತನೊಬ್ಬನೇ ಈ ಕೃತ್ಯ ಎಸಗಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವೆರಿದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.