ಬೆಂಗಳೂರು ಸ್ಪೋಟ ರೂವಾರಿ ಮದನಿ ಬಂಧನ ಸನ್ನಿಹಿತ
ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಮದನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತವಾಗಿದ್ದರಿಂದ ಯಾವುದೇ ಕ್ಷಣದಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ ನಾಯಕನನ್ನು ಬಂಧಿಸಬಹುದಾಗಿದೆ. ಇದಕ್ಕಾಗಿ ಕರ್ನಾಟಕದ ಪೊಲೀಸರು ಕೇರಳದ ಪೊಲೀಸರ ಅನುಮತಿಗಾಗಿ ಕಾಯುತ್ತಿದ್ದಾರೆ. ಹೈಕೋರ್ಟಿನ ಆಜ್ಞೆಯನ್ನು ಪ್ರಶ್ನಿಸಿ ಮದಾನಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಬಂಧನ ಸನ್ನಿಹಿತವಾಗಿದ್ದರಿಂದ ಮದಾನಿ ಬೆಂಬಲಿಗರು ಅರಾಜಕತೆ ಸೃಷ್ಟಿಸಿಬಹುದು ಎಂಬ ಕಾರಣದಿಂದ ಕೊಲ್ಲಂ ಬಳಿಯ ಅನ್ವರ್ಸೆರಿ ಎಂಬ ಪ್ರದೇಶದಲ್ಲಿ ಅಪರಾಧಿ ಪ್ರಕ್ರಿಯಾ ಸಂಹಿತೆಯ 144ನೇ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆ ಸ್ಥಳದಲ್ಲಿ ಜಮಾಯಿಸಿದ ಜನರನ್ನು ದೂರ ಓಡಿಸಲು ಎರಡು ಸುತ್ತು ಅಶ್ರುವಾಯುವನ್ನು ಸಿಡಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದೆ.
ಮದನಿಯ ಮನೆ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದಕ್ಕಾಗಿ ವಿಶೇಷ ಸೇನಾ ಪಡೆಯನ್ನು ಕೂಡ ಕರೆಸಲಾಗಿದೆ. ಕೇರಳ ಪೊಲೀಸರು ಕೂಡ ಮದಾನಿಯನ್ನು ಬಂಧಿಸುವಲ್ಲಿ ಕರ್ನಾಟಕದ ಪೊಲೀಸರಿಗೆ ಎಲ್ಲ ರೀತಿಯಲ್ಲಿ ಸಹಕರಿಸುವುದಾಗಿ ವಾಗ್ದಾನ ನೀಡಿದ್ದಾರೆ.
2008ರ ಜುಲೈ 25ರಂದು ಬೆಂಗಳೂರು ಸರಣಿ ಸ್ಫೋಟದಲ್ಲಿ ಓರ್ವ ಮಹಿಳೆ ಸತ್ತು ಹಲವಾರು ಜನ ಗಾಯಗೊಂಡಿದ್ದರು. ಕೋಯಂಬತ್ತೂರಿನಲ್ಲಿ ನಡೆದ ಸ್ಫೋಟದಲ್ಲಿ 58 ಜನ ಹತರಾಗಿದ್ದರು. ಆದರೆ, ಕೋಯಂಬತ್ತೂರು ಪ್ರಕರಣದಲ್ಲಿ ಮದನಿಗೆ ಖುಲಾಸೆಯಾಗಿದೆ.