ಎಸ್ ಬಿಐನಿಂದ ಬಡ್ಡಿ ದರ ಪರಿಷ್ಕರಣೆ
ಬ್ಯಾಂಕಿನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಒ.ಪಿ ಭಟ್ ಅವರು ಸಾಲ ಮಾರುಕಟ್ಟೆ ಏರುಮುಖವಾಗಿದ್ದು, 25 ಮೂಲ ಅಂಶಗಳಷ್ಟು ಏರಿಕೆ ಅನಿವಾರ್ಯ ಎಂದು ಹೇಳಿದರು.
ಬಡ್ಡಿ ದರಗಳು ಹಾಗೂ ಠೇವಣಿ ದರಗಳು ಬಹುತೇಕ ಕೆಳಮಟ್ಟದಲ್ಲಿದ್ದು, ರಿಸರ್ವ್ ಬ್ಯಾಂಕು ಹಣದುಬ್ಬರ ಹಾಗೂ ನಗದು ಲಭ್ಯತೆಯನ್ನು ಸರಿದೂಗಿಸುವ ಪ್ರಕ್ರಿಯೆಯಲ್ಲಿದ್ದು, ಬಡ್ಡಿ ದರಗಳು ಏರುಮುಖವಾಗಲಿವೆ ಎಂದು ಅವರು ತಿಳಿಸಿದರು.
ಕಳೆದ ಜುಲೈ 17 ರಂದು ರಿಸರ್ವ್ ಬ್ಯಾಂಕು ರೆಪೋ ಹಾಗೂ ರಿವರ್ಸ್ ರೆಪೋ ದರಗಳನ್ನು ಏರಿಸಿದ ಬೆನ್ನಲ್ಲೇ ಬಹುತೇಕ ಸಾರ್ವಜನಿಕ ರಂಗದ ಬ್ಯಾಂಕ್ ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್ ಗಳು ತಮ್ಮ ಬಡ್ಡಿ ದರಗಳನ್ನು ಏರಿಕೆ ಮಾಡಿದ್ದವು.
ಆದರೆ ಬ್ಯಾಂಕುಗಳ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಬ್ಯಾಂಕ್ ಗಳು ರಿಸರ್ವ್ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಇರಿಸಬೇಕಾದ ಠೇವಣಿ ಆಗಿದ್ದು ಮಾರುಕಟ್ಟೆಯಲ್ಲಿ ಹಣದ ಹರಿವಿನ ಪ್ರಮಾಣ ಕಡಿಮೆಯಾಗದಂತೆ ಈ ಕ್ರಮ ಕೈಗೊಂಡಿದೆ.
ಹಣದುಬ್ಬರಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದ್ದು, ಕೆಲ ಪ್ರಮುಖ ಖಾಸಗೀ ಬ್ಯಾಂಕ್ ಗಳಾದ ಐಸಿಐಸಿಐ, ಓರಿಯೆಂಟಲ್ ಬ್ಯಾಂಕ್ ಮತ್ತು ಹೆಚ್ಡಿಎಫ್ ಸಿ ಬ್ಯಾಂಕ್ ತಮ್ಮ ಬಡ್ಡಿ ದರವನ್ನು ಹೆಚ್ಚಿಸಿವೆ.
ಈ ಹಣಕಾಸು ವರ್ಷದಲ್ಲಿ ಬ್ಯಾಂಕು ಹಕ್ಕಿನ ಶೇರು ವಿತರಣೆಯ ಮೂಲಕ 20,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಿದೆ. ಈ ವರ್ಷ ಬ್ಯಾಂಕಿನ ಸಾಲ ಬೆಳವಣಿಗೆ ಶೇ 21-22 ರಷ್ಟು ಆಗಲಿದೆ ಎಂದು ಭಟ್ ಅವರು ಹೇಳಿದರು.