ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಾತ್ಮತೀರ್ಥರಿಂದ ರಾಜಧರ್ಮ ಬೋಧನೆ

By * ಚಂದ್ರಶೇಖರ್, ಸವಣೂರು
|
Google Oneindia Kannada News

Seer Sathyatma Thirtha
ಸವಣೂರು, ಆ.13: ನೊಂದವರಿಗೆ ಸಾಂತ್ವನ, ಮಂದಬುದ್ಧಿಗಳಿಗೆ ಭವಿಷ್ಯದ ಆಶೆ ಹಾಗೂ ಪ್ರಾಜ್ಞರಿಗೆ ತಕ್ಷಣದ ಫಲಗಳನ್ನು ನೀಡುವ ಮೂಲಕ ಅವರನ್ನು ಕರ್ತವ್ಯ, ಧರ್ಮ ಕಾರ್ಯಕ್ಕೆ ಪ್ರಚೋದಿಸಬೇಕು ಎಂದು ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು.

ಸವಣೂರಿನ ಶ್ರೀ ಸತ್ಯಬೋಧ ಮಂಟಪದಲ್ಲಿ ಉಪದೇಶಾಮೃತ ನೀಡಿದ ಶ್ರೀಗಳು, ರಾಜರು ಆಪತ್ಕಾಲದಲ್ಲಿ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಹಾಭಾರತದ ಸಂದೇಶಗಳನ್ನು ವಿವರಿಸಿದರು.

ರಾಜರು ದುರ್ವಿಚಾರ, ದುಶ್ಚಟಗಳ ಬಗ್ಗೆ ಅತಿಯಾದ ಆಸಕ್ತಿ ಹೊಂದಿದಲ್ಲಿ ತಮ್ಮ ನೈತಿಕತೆ, ಪ್ರಾಮಾಣಿಕತೆ ಹಾಗೂ ಅಂತಃಸತ್ವವನ್ನು ಕಳೆದುಕೊಳ್ಳುತ್ತಾರೆ. ಜನತೆ ರಾಜರ ಈ ನೂನ್ಯತೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ರಾಜರು ಪ್ರತಿಯೊಂದು ವಿಷಯದಲ್ಲಿ ಗಂಭೀರ ಚಿಂತನೆ ಮಾಡಬೇಕು. ಬಳಿಕ ಅದನ್ನು ಸಿಂಹದಂತೆ ಕಾರ್ಯಗತಗೊಳಿಸಬೇಕು ಎಂದರು.

ರಾಷ್ಟ್ರ, ಸೈನ್ಯ, ಸಂಘಕ್ಕೆ ಆಪತ್ತುಗಳು ಬಂದಾಗ ತಕ್ಷಣ ಕಾರ್ಯಪ್ರವೃತ್ತನಾಗಬೇಕು. ಯುದ್ದ, ಪ್ರತಿಭಟನೆ ಅಥವಾ ಪಲಾಯನ ಯಾವದಾದರೂ ಒಂದನ್ನು ತಕ್ಷಣಕ್ಕೆ ತೋರಬೇಕು. ವಿಳಂಬ ಮಾಡಿ ಕೈಗೊಳ್ಳುವ ಕಾರ್ಯಗಳು ನಿಶ್ಪಲವಾಗಿದ್ದು, ದುರ್ಜನರು, ವೈರಿಗಳೊಂದಿಗೆ ಸದಾಕಾಲ ಪೌರುಷ ತೋರಬಾರದು. ಜನತೆ ತಮ್ಮ ಕಾರ್ಯ ಹಾಗೂ ವರ್ತನೆಯಲ್ಲಿ ಉದಾಸೀನ ಮಾಡಿದಲ್ಲಿ ಶಿಕ್ಷೆ ದಂಡದ ಎಚ್ಚರಿಕೆ ಇರಬೇಕು. ಪ್ರಸಂಗ ಬಂದಾಗ ವಿನೀತ ಭಾವವೂ ಇರಬೇಕು. ಅವಕಾಶ ಲಭಿಸಿದಾಗ ಅಗ್ನಿಯ ಜ್ವಾಲೆಯಂತೆ ಪ್ರಕಟಗೊಳ್ಳಬೇಕು ಎಂದರು.

ಕೃತಘ್ನರಾದ ವ್ಯಕ್ತಿಗಳಿಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಸಹಾಯ ಮಾಡಬೇಕು. ಉಪಕಾರದ ಶೇಷವನ್ನು ಉಳಿಸಿಕೊಳ್ಳಬೇಕು. ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಕೋಗಿಲೆಯಂತೆ ಸಿಹಿಯಾದ ಮಾತುಗಳಿರಬೇಕು. ದುರ್ಜನರಿಗೆ ಮುಳ್ಳುಗಳಿರುವ ವರಾಹದಂತೆ ಗೋಚರಿಸಬೇಕು. ರಾಜರು ಸ್ವತಃ ಉನ್ನತವಾದ ವ್ಯಕಿತ್ವ ವರ್ತನೆ ಹೊಂದಿರಬೇಕು. ಎಲ್ಲ ಪ್ರಜೆಗಳಿಗೂ ಆದರ್ಶಪ್ರಾಯನಾಗಿರಬೇಕು.

ಮನೆ-ಮನಸ್ಸಿನಲ್ಲಿ ಸ್ಥಳಾವಕಾಶ ಹೊಂದಿರಬೇಕು. ಹೃದಯವೈಶಾಲ್ಯತೆ ಹೊಂದಿರಬೇಕು. ಸತ್ಕರ್ಮಗಳಿಂದ ಜನರನ್ನು ಸಂತೋಷಗೊಳಿಸಬೇಕು. ಮಿತ್ರನಂತೆ ಸಜ್ಜನರಿಗೆ ಹಿತ ಬಯಸಬೇಕು. ಶತ್ರುಗಳ ಕುಶಲವನ್ನೂ ವಿಚಾರಿಸುವ ಮೂಲಕ, ಧ್ವೇಶದ ಉಗ್ರತೆ ಕಡಿಮೆಗೊಳಿಸಿಕೊಳ್ಳಬೇಕ ಎಂದು ತಿಳಿಸಿದರು.

ಸಾಧಿಸುವ ಛಲ ಮುಖ್ಯ: ನಿರಾಸೆ, ನಪುಂಸಕತ್ವ, ವೈರಾಗ್ಯದ ಭಾವನೆ ಬಿಡಬೇಕು. ಆಶಾವಾದದೊಂದಿಗೆ ಸಾಧಿಸುವ ಛಲ ಹೊಂದಿರಬೇಕು. ದುರಹಂಕಾರ ಇರಬಾರದು. ಒಳ್ಳೆಯ ಕೆಲಸಕ್ಕೆ ಬರುವ ಅಪವಾದಗಳಿಗೆ ಹೆದರಬಾರದು. ಕಾಲಕ್ಕಾಗಿ ಪ್ರತೀಕ್ಷೆ ಮಾಡಬಾರದು. ಶೀಘ್ರದಲ್ಲಿ ಗುರಿಯನ್ನು ಪಡೆದುಕೊಳ್ಳುವ ತವಕ ಹೊಂದಿರಬೇಕು. ರಾಜರ ದೋಷಗಳು ಶತ್ರುವಿಗೆ ತಿಳಿಯಬಾರದು. ಶತ್ರುಗಳ ದೋಷಗಳ ಬಗ್ಗೆ ಅಧ್ಯಯನವನ್ನೇ ಮಾಡಬೇಕು. ಮಂತ್ರಾಲಯ (ವಿಧಾನಸೌಧ)
ದಲ್ಲಿನ ವಿಚಾರ, ಚಿಂತನೆಗಳು ಮೊದಲೇ ಬಹಿರಂಗವಾಗಬಾರದು ಎಂದು ರಾಜಧರ್ಮಗಳನ್ನು ವಿವರಿಸಿದರು.

ಬಹಳ ಜನರಿದ್ದಲ್ಲಿ ಕಲಹ, ಇಬ್ಬರಿದ್ದಲ್ಲಿ ಹರಟೆ, ಏಕಾಂತವಿದ್ದಲ್ಲಿ ಸಾಧನೆಯಾಗುತ್ತದೆ. ಬಕ ಪಕ್ಷಿಯಂತೆ ಏಕಾಂತದಲ್ಲಿ ಚಿಂತನೆ ಮಾಡಿ. ಚಿಂತನೆ ಆಲೋಚನೆಗಳು ಇಲ್ಲದಿದ್ದಲ್ಲಿ ತಪ್ಪು ಹೆಜ್ಜೆಗಳಾಗುತ್ತದೆ. ತಪ್ಪಿತಸ್ಥರಿಗೆ ದಂಡ ವಿಧಿಸುವಾಗಲೂ ಎಚ್ಚರಿಕೆ ತೋರಿ. ಪ್ರತಿ ಸಲವೂ ಶಿಕ್ಷೆಗೆ ಮುಂದಾಗದೇ ಕೆಲವು ಬಾರಿ ಕಂಡೂ ಕಾಣದಂತೆ ಇರಿ.

ಪರಿಸ್ಥಿತಿಗಳಿಗೆ ಅನುಗುಣವಾಗಿ ಕುರುಡ, ಕಿವುಡರಂತೆ ವರ್ತಿಸಿ. ಶತ್ರುಗಳ ನಿಯಂತ್ರಣಕ್ಕೆ ಅವರಲ್ಲಿ ಆಸೆಗಳನ್ನು ಹುಟ್ಟಿಸಿ. ಅನಿವಾರ್ಯ ಕಾರಣಗಳನ್ನು ಒಡ್ಡಿ, ನಿಷ್ಟುರತೆಯಿಂದ ತಪ್ಪಿಸಿಕೊಳ್ಳಿ. ಆಪತ್ತುಗಳು ಬರುವ ಮುನ್ನವೇ ಪರಿಹಾರ ಮಾರ್ಗ ಕಂಡುಕೊಳ್ಳಿ. ಅಂತಿಮ ಹಂತದಲ್ಲಿ ಭಯಕ್ಕೆ ಒಳಗಾಗಬೇಡಿ. ಆಪತ್ತುಗಳನ್ನು ಎದುರಿಸಲು ಪೂರ್ವಸಿದ್ದತೆಯಲ್ಲಿ ಇರಿ ಎಂದು ರಾಜಧರ್ಮದ ಸಾರವನ್ನು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X