ನಾನು ಉಪವಾಸ ಸತ್ಯಾಗ್ರಹ ಆರಂಭಿಸ್ತೀನಿ : ಪೇಜಾವರ
ಈ ಮಾಹಿತಿ ತಿಳಿದುಕೊಂಡ ಸ್ವಾಮೀಜಿಗಳು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಖಾರವಾಗಿ ಪತ್ರ ಬರೆದು ಬುಧವಾರ (ಆ.11) ಫ್ಯಾಕ್ಸ್ ಮಾಡಿದ್ದಾರೆ. ತನಗೆ ಸರಕಾರ ನೀಡಿರುವ ವಚನ ಭಂಗವಾದರೆ ಚಾತುರ್ಮಾಸ ವೃತದ ನಡುವೆಯೇ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ. ಎರಡನೇ ಮತ್ತು ಮೂರನೇ ವಿಶೇಷ ವಿತ್ತ ವಲಯಕ್ಕೆ ಭೂಸ್ವಾಧೀನ ಮಾಡುವ ತೀರ್ಮಾನ ತೆಗೆದುಕೊಳ್ಳುವ ಮುಂಚೆ ತಮ್ಮ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಶ್ರೀಗಳು ಆರಂಭದಿಂದಲೇ ಎಚ್ಚರಿಕೆ ನೀಡುತ್ತಾ ಬಂದಿದ್ದರು.
ಸ್ವಾಮೀಜಿಗಳ ಪತ್ರದ ಸಂದೇಶ ಅರ್ಥ ಮಾಡಿಕೊಂಡ ಗೃಹ ಸಚಿವ ವಿ ಎಸ್ ಆಚಾರ್ಯ "ಎಲ್ಲಾ ಸರಿ ಮಾಡುತ್ತೇವೆ, ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಡಿ ಎಂದು" ವಿನಂತಿಸಿಕೊಂಡಿದ್ದಾರೆ. ಇದೇ ವಾರ ಮೈಸೂರಿನಲ್ಲಿ ನಡೆಯುವ ಪಕ್ಷದ ಸಮಾವೇಶಕ್ಕೆ ಪಕ್ಷದ ವರಿಷ್ಠ ಎಲ್ ಕೆ ಆಡ್ವಾಣಿ ಆಗಮಿಸುತ್ತಿದ್ದಾರೆ. ಸ್ವಾಮೀಜಿ ಬಗ್ಗೆ ವಿಶೇಷ ಗೌರವ ಹೊಂದಿರುವ ಆಡ್ವಾಣಿ ಅವರಿಗೆ ಉಪವಾಸದ ಸುದ್ದಿ ಗೊತ್ತಾದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಕಾರಣಕ್ಕೆ ಸದ್ಯ ಭೂಸ್ವಾಧೀನ ಕೈಬಿಡುವುದಾಗಿ ಸರಕಾರ ಭರವಸೆ ನೀಡಿದೆ ಎನ್ನಲಾಗಿದೆ.
ಚಾತುರ್ಮಾಸ ವೃತ ಕೈಗೊಂಡು ಮುಗಿಯುವ ತನಕ ಊರಿನಿಂದ ಹೊರಹೋಗುವಂತಿಲ್ಲ. ಇದೇ ಸುಸಂಧರ್ಭ ಎಂದು ಪರಿಗಣಿಸಿರುವ ಸರಕಾರ 15 ದಿನದೊಳಗೆ ಭೂಸ್ವಾಧೀನ ನಡೆಸಲು ನಿರ್ಧರಿಸಿತ್ತು.