ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲಿಬಿಲ್ಲಿ ಕೈಯಲ್ಲಿ ಕಲ್ಲಾಬಿಲ್ಲಿಯಾದ ಕೈ

By * ಮೃತ್ಯುಂಜಯ ಕಲ್ಮಠ
|
Google Oneindia Kannada News

Breaking News
ಲೇ ತಮ್ಮಾ ಕಿಲಿಬಿಲ್ಲಿ ಎಲ್ಲಿಗೆ ಹೊಂಟೀಲೇ, ಭಾಳಾ ಜೋರಾಗಿ ಹೊಂಟೈತಲ್ಲ ಗಾಡಿ, ಏತ್ಲಾಗ ಮಖಮಾಡೈತಿ,

ರೀ ಸೌಕಾರ್ರ ನನ್ನ ಮಾತಾಡಿಸಬ್ಯಾಡ್ರಿ ಮತ್ತ ತಡೀನೂ ಬ್ಯಾಡ್ರೀ, ನಮ್ಮಪ್ಪುಗ ತಟಗಾದ್ರು ಬುದ್ಧಿ ಐತೀ ಅಂತ ನಿಮ್ಗ ಅನ್ನಿಸ್ತೈತನ್ರಿ. ಅಲ್ರೀ ಈಗ್ಗೆ ಒಂದೊರ್ಸ ಆತು. ಲಗ್ನ ಮಾಡೋ ಎಪ್ಪ ಅಂತ ಹೊಯ್ಕಂತೀನಿ. ಹುಂ, ನನ್ನ ಮಾತಾ ಕೇಳವಲ್ಲ, ನನಗಂತೂ ತಲಿ ಚಿಟ್ ಹಿಡ್ದ ಗೊಬ್ರ ಆಗೈತ್ರೀ. ಈ ಊರಿನ ಸಾವಾಸನ ಬ್ಯಾಡ ಅಂತ ಬೆಂಗ್ಳೂರ್ಗೆ ಹೊಂಟೀನ್ರೀ ಬೆಂಗ್ಳೂರ್ಗೆ.

ಲೇ ಮಂಗ್ಯಾ... ಮನ್ಯಾರ ಬಳ್ಳಾರೀಗೆ ಹೋಗಿ ಬಂದ್ಯಲ್ಲಲೇ...ಕಾಂಗ್ರೆಸ್ ಸಮಾವೇಶಕ್...ಮಗನ

ಓಹೋ...ಅದೊಂದು ದೊಡ್ಡ ರಾಜಕೀ ದೊಡ್ಡಾಟ್ರೀ, ಒಂದ್ ದಿವ್ಸ ಪ್ರವಾಸ ಇದ್ದಂಗ ಇತ್ ರೀ, ಯಾರೋ ಕರ್ಕೊಂಡು ಹೋದ್ರು, ಯಲ್ಲಮ್ಮನ ಜಾತ್ರಿ ಮಾಡಿ ಬಂದ್ವಿ, ಬರಬ್ಬರಿ ಎಡಾಹೊತ್ತಿನ ಊಟ, ದಿನಕ್ಕೆ 300 ರುಪಾಯಿ ಕೊಟ್ರು, ಈಸ್ಕೊಂಡು ಬಂದ್ವಿ, ಏನ್ ಗಣಿನೂ, ಏನ್ ಪಾದಯಾತ್ರೆನೂ... ಎಲ್ಲಾರ ಹೋದ್ರು ಅಂತ ನಾನು ಹೋಗಿದ್ದೆ. ಒಂದ್ ಮಾತ್ ಹೇಳ್ತೀನ್ರಿ, ಸಿದ್ದ ಕವಲೂರಿಗೆ ಹೋಗಿ ಬಂದ ಅಂತಾರಲ್ಲ, ಹಂಗ್ ಹೋಗಿ ಬಂದೆ ನೋಡ್ರೀ.

ಲೇ ಕಳ್ಳ ನಿನ್ನೆ ಮೊನ್ನೆವರ್ಗೂ ಜನಾರ್ದನರೆಡ್ಡಿ, ಶ್ರೀರಾಮುಲು ಅಂತ ಬಾಲಬಡಿತ್ತಿದ್ದ ಮಗಾ ನೀನು, ಈಗಾಗ್ಲೆ, ನಮ್ಮ ಕಾಂಗ್ರೆಸ್ ಅನ್ನಾಕತ್ತಿಯಲ್ಲಲೇ ಏನಾತ್ ನಿಂಗೆ. ರೊಕ್ಕ ಕೊಟ್ಟಾರ ಕಡೆಗೆ ಜೈ ಹೂಜುರ್ ಅನ್ನೂ ಮಗಾ ಅಳ್ ನೀನು...

ತರಬ...ತರಬ್ರೀ... ಫಸ್ಟ್ ನಾನು ಬಳ್ಳಾರಿ ಸುದ್ದಿನ ಕಂಪ್ಲಿಟ್ ಮಾಡ್ತೀನಿ, ಆ ಮ್ಯಾಲೇ ನಿಮಗೆ ಹೆಂಗ್ ಬಳ್ಳಾರೀಗೆ ಹೋದೆ ಅನ್ನೋದನ್ನ ಹೇಳ್ತೀನಿ.

ಲೇ ಅದ್ಯೆಲ್ಲ ಬ್ಯಾಡ್ಲೇ, ಫಸ್ಟ್ ನೀನು ಬಳ್ಳಾರೀಗೆ ಹೆಂಗ್ ಹೋದಿ ಅನ್ನೋದನ್ನು ಹೇಳ್ ಮಗನ...

ಅಯ್ಯೋ ಸೌಕಾರ್ರ ಏನಂತ ಹೇಳ್ಲಿರ್ರಿ, ನಮ್ಮ ತಾಲ್ಲೂಕು ಕಾಂಗ್ರೆಸ್ ಲೀಡರ್ರು ಗಂಟಬಿದ್ರು, ಕಿಲಿಬಿಲ್ಲಿ ನೀನೂ ಬಳ್ಳಾರಿಗೆ ಬರಾಕಬೇಕಪ, ನಮ್ಮ ರಾಜ್ಯ ನಾಯಕರು ಕಷ್ಟಪಟ್ಟ ಬೆಂಗಳೂರಿಂದ ನಡೆಕೊಂಡ ಬಳ್ಳಾರಿಗೆ ಬಂದಾರ, ರೆಡ್ಡಿ ಸೊಕ್ಕು ಮುರ್ಯಾಕ್ ಬಂದಾರ, ಗೊತ್ತ ಐತೆಲ್ಲ ನೀನಗ, ಹಾಂಗಾಗಿ ನಮ್ಮ ಸಿದ್ರಾಮಯ್ಯನೋರ ಕೈಗಟ್ಟಿ ಮಾಡೋಣ ಬಾರ್ಲೆ ಅಂದ್ರುರೀ, ಸ್ವಾಮಿ, ನನ್ನ ಕೆಲಸ ಐತ್ರೀ, ಸ್ವಾರಿ ನನಗ ಬರಾಕ್ ಆಗಲ್ಲ ಅಂದೆ,

ಅಲ್ಲಲೇ ಕಿಲಿಬಿಲ್ಲಿ, ನಿಷ್ಠಾವಂತ ಕಾರ್ಯಕರ್ತರ ಬಳಗದಾಗ ನೀನೂ ಒಬ್ಬಾಂವ, ನಮ್ಮ ಪಕ್ಷದೋರು ಇಷ್ಟು ದೊಡ್ಡ ಪಂಕ್ಷನ್ ಮಾಡಾಕತ್ಯಾರ, ನೀನು ಬರಂಗೀಲ್ಲ ಅಂದ್ರೆ ಹ್ಯಾಂಗ್ಲೆ ?

ನೋಡ್ರೀ, ಪ್ರತಿ ಸಲಾನೂ ನಮ್ಮನ್ನ ಬಳಿಸಿಕಂತೀರಿ, ಕೈಬಿಡ್ತೀರಿ, ಇಂತ ಕೆಲ್ಸ ಇದ್ದಾಗ ಮಾತ್ರ, ಈ ಕಿಲಿಬಿಲ್ಲಿ ನೆಪ್ ಅಕ್ಕಾನಾ, ಎಲ್ಲಿದ್ ಹೋಗ್ರಿ ಅಂದೇರಿ ನಾನೂ, ಆದ್ರೂ ಅವ್ರು ಬಿಡಲೀಲ್ರಿ. ಕರಕೊಂಡು ಹೋದ್ರ.

ಅಲ್ಲಿ ಹೊಕ್ಕಿನಿ, ಎನ್ ಜನ ಅಂತೀರಿ, ಕೊಟ್ಟೂರೇಶನ ಜಾತ್ರಿ, ಎಲ್ಲಿ ನೋಡಿದ್ರು ಮಂದಿ ಮಂದಿ ಮಂದಿ. ಬಳ್ಳಾರಿ ತುಂಬೆಲ್ಲಾ ಟವಲ್ಲಿನ ಮಂದಿ, ಎಲ್ಲಿ ನೋಡಿದ್ರೂ ಅಲ್ಲಿ ತಂಕಾ ಮಾಸಿದ ಮುಖನಾ ಕಾಣ್ತಿತ್ರೀ. ದೂರ ಸುರಪುರದಿಂದ ನಮ್ಮ ಜಿಪುಣಶಟ್ಟಿನೂ ಬಂದಿದ್ದ.

ಅಂವ ಯಾರ್ಲೆ ಜಿಪುಣಶೆಟ್ಟಿ...

ಸುರಪುರದ ನಮ್ಮ ಮಾವ್ ರ್ರೀ, ಪರಸಾಲ್ಯೆಪ್ಪ ಬಾರ್ಕೋಲು ಆವನ ಹೇಸ್ರು, ಅಯ್ಯೋ ಕೂಳು ತಿನ್ನಾಕೂ ಹಿಂದ್ ಮುಂದ್ ನೋಡುವಂತ ಕೆಟ್ಟ ಜುಗ್. ಅಂತಾಂವ ಬಳ್ಳಾರಿಗೆ ಬಂದಿದ್ದ, ನಾನು ಬಿಡ್ಲಿಲ್ಲ. ಮಾವನ ಚೆಡ್ಡಿ ಹರದ ಕೈಬಿಟ್ಟೆ,

ಅಂದ್ರೆ...

ಸುರಪುರದಿಂದ ಮಾವ ಬಂದಿರೋದ ಒಂದ್ ದೊಡ್ಡ ರಹಸ್ಯ ಅಂತಾ ಗೊತ್ತಾತ, ಮೆಲ್ಲಕ ರಮಿಸಿ ಮಾವ ಅತ್ತಿ ಹೆಂಗದಾಳೋ, ಸೊಸಿ ಹೆಂಗದಾಳೋ, ಊಡಾಳ ಮಂಜ್ಯಾ ಸಾಲೀಗೆ ಹೊಕ್ಕನ ಇಲ್ಲ, ಹಿಂಗೆ ಅದು ಇದು ಅಂತ ವಿಚಾರಿಸಿದೆ, ಮಾವ ಎಲ್ಲ ಹೇಳಿದ, ಹೌದು, ಬಳ್ಳಾರೀಗೆ ಬಂದಿಯೆಲ್ಲಾ ಏನಾಪ ಸ್ಪೇಷಲ್ ಅಂದೆ,

ಲೇ ಕಿಲಿಬಿಲ್ಲಿ ಬಳ್ಳಾರೀಗೆ ಸುಮ್ನೆ ಬರಾಕ್ ನಾನೇನು ನಿಮ್ಮಪ್ಪನಂಗ ದಡ್ಡನ್ನ ಮಾಡಿಯನು, ಲಾಭ ಇರೋದರಿಂದ ಬಂದಿರೋದು, ಸುರಪುರದಿಂದ ಗಾಡಿ ಬಿಟ್ಟಿದ್ರು, ದಿನಕ್ಕೆ 300 ರುಪಾಯಿನೂ ಕೊಡ್ತೀವಿ ಅಂದ್ರು, ಮಳೀ ಇಲ್ಲ, ಪಳಿ ಇಲ್ಲ, ಬಳ್ಳಾರೀಗೆ ಹೋಗಿ ಬಂದ್ರಾತು ಅಂತ ಬಂದೆ, ಹಿಂಗ ನೋಡ್ರೀ ಎಲ್ಲಾ ಮಂದಿ ಬಂದಿದ್ದು ಹಿಂಗ್...

ಅಲ್ಲಲೇ ಅದು ಹೋಗ್ಲಿ...ಬಳ್ಳಾರ್ಯಾಗ ಏನಾತು ಹೇಳಲೇ ಅಂದ್ರ ಬ್ಯಾರೇ ಸ್ಟೋರಿನ ಸುರು ಮಾಡಿಕೊಂಡೆಯಲ್ಲಲ್ಲೇ...

ಏನಂತ ಹೇಳ್ಲಿರ್ರಿ, ಏನ್ ಕುಣಿತಾನ್ರಿ ಅಂವ ರೆಡ್ಡಿ, ಅಬಾಬಬಬಬ, ರೊಕ್ಕ ಐತೀ ಅಂತ ಹಂಗಾ ಜಿಗದಾಡೋದು. ದೊಡ್ಡೋರು, ಸಣ್ಣೋರು, ಹುಂ ಯಾರ್ಗೂ ಮರ್ಯಾದೆ ಕೋಡಂಗಿಲ್ರೀ. ಆ ನಮೂನಿನಾ ದೌರ್ಜನ್ಯ, ಹಾರ್ಯಾಟ, ಕೂಗ್ಯಾಟ ಎಪ್ಪಾ, ಶಿವಶಿವ. ಒಂದ ಮಾತ ಹೇಳ್ತಿನಿ ನಿಮ್ಗ, ಉರಿದೋರು, ಮೆರದೋರು ಭಾಳಾ ದಿವ್ಸ ಉಳಿಗಿಂಲ್ಲರ್ರಿ, ನಾಕ್ ದಿವ್ಸ ಅವ್ರದು, ಅಂವನ ಸೊಕ್ಕ ಅಡಗಿಸ್ತಾನಾ ನೋಡ್ರಿ ನಮ್ಮ ಸಿದ್ರಾಮಣ್ಣ.

320 ಕಿಲೋಮೀಟ್ರ ನಡೆಕೊಂಡ ಬಂದಾರ ಸುದ್ದಿ ಹೇಳಂದ್ರ, ರೆಡ್ಡಿ ಸುದ್ದಿ ಹೇಳಿಕ್ಯತ್ತಿಯಲ್ಲಲೇ...

ನೋಡ್ರಿ ನಾಕ್ ತಾಸು ಕಾರ್ಯಕ್ರಮ ನಡೀತು, ಅಷ್ಟೂ ಹೇಳಾಕ್ ಆಗಲ್ಲ. ಸಂಕ್ಷಿಪ್ತ ಹೇಳ್ತೀನಿ. ಕೃಷ್ಣನ ತಂತ್ರ ನನಗೂ ಗೊತ್ತೈತಿ ಅಂತ ಡಿಕೆಶಿ ಅಂದ್ರು, ಇರಬಾರದು ಮಾನ ಇಲ್ಲದ ಮ್ಯಾಲೇ, ನಾವು ಹುಟ್ಸಿದ ಜಗ್ಗೇಶಿ, ಸೋಮೇಶಿ, ಯೋಗೀಶ್ ಅವರನ್ನು ನನ್ನ ಮಕ್ಳೂ ಅಂತೀಯೊಲ್ಲ ಯಡಿಯೂರಪ್ಪ, ಶಕ್ತಿ ಇದ್ರ ಮಕ್ಳನ್ನ ಹುಟ್ಸು. ನಿನಗ ಆಗಲ್ಲ. ಯಾಕಂದ್ರ ನೀನು ಷಂಡ ಅಂತ ನನಗ್ ಗೊತ್ತು ಅಂತ ಯಡಿಯೂರಪ್ಪನ್ನ ಸಿಎಂ ಇಬ್ರಾಹಿಂ ಹಿಗ್ಗಾಮುಗ್ಗಾ ಟೀಕ್ಸಿದ್ರು, ಗಣಿಗಾರಿಕೆ ರಾಷ್ಟ್ರೀಕರಣ ಆಗ್ಬೇಕು ಅಂತ ಕೃಷ್ಣ, ಖರ್ಗೆ, ಜಾಫರ್ ಷರೀಪ್ ಹೇಳಿದ್ರು, ಇನ್ನ ಲಾಸ್ಟ್ ಸಿದ್ರಾಮಣ್ಣನ ಛಾನ್ಸ್, ರೆಡ್ಡಿ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ನಾನು ಬಳ್ಳಾರ್ಯಾಗ ಚುನಾವಣೆಗೆ ನಿಲ್ತೀನಿ, ನೀನು ನಿಲ್ತಿಯಾ ಅಂತ ಜನಾರ್ದನರೆಡ್ಡಿಗೆ ಸವಾಲು ಹಾಕಿದ್ರು. ಕೂಡಿದ ಮಂದಿ ಕೇಕೆ ಹೊಡೆದ್ರು, ಅದರಲ್ಲಿ ನಾನೂ ಒಬ್ಬ. ಹಿಂಗ್ ಯಡಿಯೂರಪ್ಪ, ರೆಡ್ಡಿಗಳನ್ನು ಕಾಂಗ್ರೆಸ್ ಬೈದು ಜೈಹಿಂದ್ ಜೈ ಕರ್ನಾಟಕ ಮಾತೆ ಅಂದು ಭಾಷಣ ಮುಗ್ಸಿದ್ರು. ಒಟ್ನಲ್ಲಿ ಬಳ್ಳಾರೀಗಂತೂ ಹೋಗಿ ಬಂದ್ಯಾ ಯಾಕ್ ಹೋಗಿದ್ದ ಅಂತ ನನಗ ತಿಳಿದಿಲ್ರೀ...

ನಿರೀಕ್ಷಿಸಿ : ಬಿಗ್ಗೆಸ್ಟ್ ಛತ್ರಿ ಅವಾರ್ಡ್ ಗೋಸ್ ಟು ಕಿಲಿಬಿಲ್ಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X