ಹಾಲು ಹಾಕುವ ವಿದ್ಯಾರ್ಥಿಗೂ ಉಚಿತ ಸೈಕಲ್
ಬಿಜೆಪಿ ಸರಕಾರ ಮೊದಲ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿದ ಆರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ ರೂಪಿಸಿದರು. ಇದೇ ಮೊದಲ ಸಲ ಬಿಬಿಎಂಪಿ ಗದ್ದುಗೆ ಏರಿರುವ ಬಿಜೆಪಿ ರಾಜ್ಯ ಸರಕಾರದ ಮಾದರಿಯನ್ನಾಗಿಟ್ಟುಕೊಂಡು ಹಾಲು, ಪೇಪರ್ ಹಾಕುವ ವಿದ್ಯಾರ್ಥಿಗಳಿಗೂ ಈ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ಈ ಮೂಲಕ ಮೇಯರ್ ಎಸ್ಕೆ ನಟರಾಜ್ ಜನಸಾಮಾನ್ಯರ ಮನಗೆಲ್ಲಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಬಡವರ ಮಕ್ಕಳು ಹೆಚ್ಚಾಗಿ ಹಾಲು, ಪತ್ರಿಕೆ ಮತ್ತು ಹೂವು ಮಾರುವಂತಹ ಕಾರ್ಯದಲ್ಲಿ ತೊಡಗಿ ಕಷ್ಟಪಟ್ಟು ಹಣ ಸಂಪಾದಿಸಿ ವಿದ್ಯಾಭ್ಯಾಸ ಮಾಡುತ್ತಾರೆ. ಇಂತಹ ಮಕ್ಕಳಿಗೂ ಅನುಕೂಲವಾಗಲೆಂದು ಉಚಿತ ಸೈಕಲ್ ನೀಡುವ ಕುರಿತು ಚರ್ಚೆ ನಡೆಸಲಾಗಿದ್ದು, ಅದರ ಸಾಧಕ-ಬಾಧಕಗಳ ಪರಿಶೀಲನೆ ನಂತರ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಬಿಬಿಎಂಪಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿಗಾಗಿ ಮೇಯರ್ ನಟರಾಜ್ ಕಾಯುತ್ತಿದ್ದಾರೆ. ಆ.23 ಕ್ಕೆ ಬಜೆಟ್ ಮಂಡಿಸಲಾಗುವುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.