ಬಳ್ಳಾರಿ ನಟರಾಜ ಎಕ್ಸ್ ಪ್ರೆಸ್ ಗೆ 3 ಕೋಟಿ
ಜುಲೈ 25 ರಿಂದ ಬೆಂಗಳೂರಿನಿಂದ ಆರಂಭಿಸಿದ ಕಾಂಗ್ರೆಸ್ಸಿಗರು ಪ್ರತಿ ದಿನ 16 ಕಿಮೀ ನಡೆದು 320 ಕಿಮೀ ದೂರದ ಬಳ್ಳಾರಿ ತಲುಪಿದರು. ಮಾಜಿ ಕೇಂದ್ರ ಮಂತ್ರಿ ಸಿಎಂ ಇಬ್ರಾಹಿಂ ಹೇಳಿದಂತೆ ಅಂದು ಉಪ್ಪಿಗಾಗಿ ಗಾಂಧೀಜಿ ಯಾತ್ರೆ ನಡೆಸಿದರು. ಇಂದು ಉಕ್ಕಿಗಾಗಿ ಸಿದ್ದರಾಮಯ್ಯ ಪಾದಯಾತ್ರೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ರಾಜಕೀಯ ಇತಿಹಾಸ ಪಾದಯಾತ್ರೆ ದಾಖಲಾಗಿದ್ದು ಗಮನಾರ್ಹ.
ಬೆಳಗ್ಗೆ 9 ಗಂಟೆಗೆ ಹೊರಡುತ್ತಿದ್ದ ಕಾಂಗ್ರೆಸ್ ದಂಡನಾಯಕರು ಮತ್ತು ಕಾರ್ಯಕರ್ತರು ದಾರಿ ಮಧ್ಯೆ ಎರಡು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆ ದಾರಿಯುದ್ದಕ್ಕೂ ನಡೆಯಿತು. ಅಲ್ಲದೇ ಕುಡಿಯುವ ನೀರು, ಹಣ್ಣು ಹಂಪಲು, ರಾತ್ರಿ ಮಲಗುವುದಕ್ಕೆ ಹಾಸಿಗೆ ವ್ಯವಸ್ಥೆಯನ್ನೂ ಮಾಡಬೇಕಾಗಿತ್ತು.
ಆರಂಭದಲ್ಲಿ 2 ಸಾವಿರ ಮಂದಿ ಪ್ರತಿ ಹೊತ್ತಿಗೆ ಊಟ ಮಾಡುತ್ತಿದ್ದರೆ ಮೊಳಕಾಲ್ಮೂರು ತಲುಪುವ ಹೊತ್ತಿಗೆ 30 ಸಾವಿರ ಮಂದಿ ಊಟ ಮಾಡುವಂತಾಯಿತು. ಪ್ರತಿ ನಿತ್ಯ ಮೂರು ಹೊತ್ತು 10 ರಿಂದ 15 ಸಾವಿರ ಮಂದಿಗೆ ತಿಂಡಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಆಯಾ ಜಿಲ್ಲಾ ಸಮಿತಿಗಳೇ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದರಿಂದಾಗಿ ಕರಾರುವಾಕ್ ಲೆಕ್ಕ ಸಿಗುವುದಿಲ್ಲ. ಏನಿಲ್ಲವೆಂದರೂ ದಿನಕ್ಕೆ 15 ಲಕ್ಷ ರುಪಾಯಿ ಖರ್ಚಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.