ಇನ್ಫೋಸಿಸ್ ಮೂರ್ತಿ ನಂತರ ಯಾರು?
ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತುದಾರ ಕಂಪೆನಿ ಇನ್ಫೋಸಿಸ್ ನ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಸ್ಥಾನಕ್ಕೆ ಐಸಿಐಸಿಐ ಬ್ಯಾಂಕಿನ ಕಾರ್ಯಕಾರಿ ಮುಖ್ಯಸ್ಥರಲ್ಲಿ ಒಬ್ಬರಾದ ಕೆವಿ ಕಾಮತ್ ಹಾಗೂ ಕಾರ್ನ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಸೀನ್ ಲೆಹ್ಮನ್ ಅವರನ್ನು ಕರೆ ತರಲು ಈಗಾಗಲೇ ಸಿದ್ಧತೆ ನಡೆದಿದೆ ಎಂದು ಎಕಾನಾಮಿಕ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಸ್ಥಾನವನ್ನು ತುಂಬುವ ಕಾರ್ಯಕ್ಕೆ ಕನಿಷ್ಠವೆಂದರೂ ಎರಡು ತ್ರೈಮಾಸಿಕ ಅವಧಿಗಳು ಬೇಕಾಗುತ್ತದೆ ಆದ್ದರಿಂದ, ಈಗಾಗಲೇ ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಈ ಎಲ್ಲಾ ಸಿದ್ಧತೆಗಳ ಉಸ್ತುವಾರಿ ಹೊಣೆಹೊತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಇನ್ಫೋಸಿಸ್ ನ ವಕ್ತಾರರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದಲ್ಲದೆ ಮುಂದಿನ ಹೊಸ ಆಡಳಿತ ಮಂಡಳಿ ರೂಪಿಸುವತ್ತ ಕೂಡಾ ಆಂತರಿಕ ಚರ್ಚೆ, ಸಭೆಗಳು ಇನ್ಫಿ ಅಂಗಳದಲ್ಲಿ ನಡೆದಿದೆ. ಇತ್ತೀಚೆಗೆ ಎನ್ ಡಿಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಶಿಭುಲಾಲ್ ಮುಂದಿನ ಸಿಇಒ ಆಗಲು ಸೂಕ್ತ ವ್ಯಕ್ತಿ ಎಂದು ಸ್ವತಃ ನಾರಾಯಣಮೂರ್ತಿ ಅವರೇ ಸೂಚಿಸಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.