ವರದಕ್ಷಿಣೆ ಕೇಳಿ ಇಸ್ಕೊಂಡರೆ ತಪ್ಪಲ್ಲ!
ಅವಳು ಸಾಯುವುದಕ್ಕೆ ನಿಜವಾದ ಕಾರಣಗಳೇನು? ಆಕೆ ನುಂಗಲಾರದಂತಹ ಹಿಂಸೆಯನ್ನು ಆಕೆಯ ಗಂಡ ನೀಡಿದನೇ? ಎಂಬಿತ್ಯಾದಿ ಕರಾರುವಾಕ್ಕಾದ, ದೃಢೀಕರಿಸಿದ ವಾದಗಳನ್ನು ಸರಕಾರಿ ವಕೀಲರು ಮಂಡಿಸಬೇಕು ಎಂದು ನ್ಯಾ. ಆರ್ಎಂ ಲೋಧ ಮತ್ತು ನ್ಯಾ. ಎಕೆ ಪಟ್ನಾಯಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪು ಕೊಟ್ಟಿದೆ.
ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಸಂತೋಷ್ ಎಂಬ ಮಹಿಳೆ ವರದಕ್ಷಿಣೆ ಹಿಂಸೆ ತಾಳಲಾರದೆ 1993ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಡ, ಆತನ ತಾಯಿ ಮತ್ತು ಸಹೋರರನ್ನು ಬಂಧಿಸಲಾಗಿತ್ತು. ಹೆಚ್ಚಿನ ವರದಕ್ಷಿಣೆಯಾಗಿ ಸ್ಕೂಟರ್ ಅಥವಾ 25 ಸಾವಿರ ರು. ಕೇಳಲಾಗಿತ್ತು. ವರದಕ್ಷಿಣೆ ಬೇಡಿಕೆಯಿಟ್ಟಿದ್ದ ತಾಯಿ ಮತ್ತು ಸಹೋದರರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಆದರೆ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೆಂಡತಿಯ ಸಾವಿಗೆ ಕಾರಣನಾಗಿದ್ದ ಗಂಡನನ್ನು ಕೋರ್ಟ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ 498ಎ ಮತ್ತು 304ಬಿ ಸೆಕ್ಷನ್ ಪ್ರಕಾರ ವರದಕ್ಷಿಣೆ ಕೇಳುವುದು ಅಪರಾಧವಲ್ಲ. ಆದರೆ, ಗಂಡ ಅಥವಾ ಆತನ ಕುಟುಂಬದವರು ನಡೆಸಿದ ಕ್ರೌರ್ಯ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯ ಮೂವರನ್ನು ತಪ್ಪಿತಸ್ಥರನ್ನಾಗಿ ತೀರ್ಪು ನೀಡಿತ್ತು. ಆ ತೀರ್ಪನ್ನು ಹೈಕೋರ್ಟ್ ತಿರುವು ಮುರುವು ಮಾಡಿ ಮೂವರನ್ನು ಖುಲಾಸೆಗೊಳಿಸಿತ್ತು. ಈಗ ಸರ್ವೋಚ್ಚ ನ್ಯಾಯಾಲಯ ಗಂಡನನ್ನು ಮಾತ್ರ ಅಪರಾಧಿಯನ್ನಾಗಿ ಮಾಡಿ ಮಹತ್ವದ ತೀರ್ಪು ನೀಡಿದೆ.
ಸರ್ವೋಚ್ಚ ನ್ಯಾಯಾಲಯ ವರದಕ್ಷಿಣೆ ಕೇಳುವುದೇನೂ ಅಪರಾಧವಾಗದು ಎಂದು ಹೇಳಿರುವುದು, ವರದಕ್ಷಿಣೆ ಕೇಳುವವರಿಗೆ ಮುಕ್ತ ಅವಕಾಶ ಕೊಟ್ಟಂತಾಗಿದೆ. ಹಿಂಸೆ ಮಾಡುವುದಕ್ಕೆ ಲಗಾಮು ಹಾಕಲಾಗಿದೆ. ಆದರೆ, ವರದಕ್ಷಿಣೆ ಕೇಳುವುದಕ್ಕೂ ಮೂಗುದಾರ ಬೀಳುವುದೆಂದು?
ನಿಮ್ಮ
ಮೊಬೈಲಿನಲ್ಲಿ
ದಟ್ಸ್
ಕನ್ನಡ
ಪ್ರತ್ಯಕ್ಷ!