ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನರೆಡ್ಡಿ ವಿರುದ್ಧ ನಾನೇ ಸ್ಪರ್ಧಿಸುವೆ : ಸಿದ್ದು

By Mrutyunjaya Kalmat
|
Google Oneindia Kannada News

Siddaramaiah
ಬಳ್ಳಾರಿ, ಆ. 9 : ವಿಧಾನಸಭೆಯನ್ನು ವಿಸರ್ಜಿಸಿದರೆ ನಾನು ಬಳ್ಳಾರಿಯಲ್ಲಿ ಸ್ಪರ್ಧಿಸಲು ಸಿದ್ಧ. ಆದರೆ, ನನ್ನ ವಿರುದ್ಧ ಜನಾರ್ದನರೆಡ್ಡಿಗೆ ಸ್ಪರ್ಧಿಸುವ ತಾಕತ್ತು ಇದೆಯೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದರು.

ನಗರದ ಜಿಲ್ಲಾ ಕ್ರೀಡಾಂಗಣ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ನೆರದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ ಹಂತ ಹಂತವಾಗಿ ರಾಜ್ಯ ಸರಕಾರದ ವರ್ತನೆ, ಬಳ್ಳಾರಿ ಸಚಿವತ್ರಯರ ಅಧಿಕಾರ ದುರ್ಬಳಿಕೆ, ದಬ್ಬಾಳಿಕೆ, ಶೋಷಣೆ, ಮುಖ್ಯಮಂತ್ರಿ ಯಡಿಯೂರಪ್ಪ ಸೋಗಲಾಡಿತನವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಜನಾರ್ದನರೆಡ್ಡಿ ನಿಮ್ಮ ಪಂಥಾಹ್ವಾನವನ್ನು ಸ್ವೀಕರಿಸಿ ನಾನು ಬಳ್ಳಾರಿಗೆ ಬಂದಿರುವೆ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ನಾನು ನಿಮಗೊಂದು ಸವಾಲು ಹಾಕುವೆ. ಬಳ್ಳಾರಿಯಲ್ಲಿ ಸಿದ್ಧರಾಮಯ್ಯ ಬಂದು ಸ್ಪರ್ಧಿಸಲಿ, ನಾನು ಸೋಮಶೇಖರರೆಡ್ಡಿಯನ್ನು ರಾಜೀನಾಮೆ ಕೊಡಿಸಿ ಕಣಕ್ಕಿಳಿಸುವೆ ಎಂದು ಹೇಳಿದ್ದೀರಿ. ವಿಧಾನಸಭೆ ವಿಸರ್ಜಿಸುವುದಾದರೆ ನಾನು ಬಳ್ಳಾರಿಯಲ್ಲಿ ಸ್ಪರ್ಧಿಸಲು ಸಿದ್ಧ. ಆದರೆ, ನನ್ನ ವಿರುದ್ಧ ಜನಾರ್ದನರೆಡ್ಡಿ ಸ್ಪರ್ಧಿಸುತ್ತಾನಾ ? ಎಂದು ಪ್ರಶ್ನಿಸಿದರು.

ರೆಡ್ಡಿಗಳೆ ನಿಮ್ಮಂಥ 100 ರೆಡ್ಡಿಗಳ ಬಂದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದಿದ್ದೀರಿ, ಇದೀಗ ನಾನು ಬಂದಿದ್ದೇನೆ ಏನೂ ಮಾಡುತ್ತೀರಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು. 2003ರಲ್ಲಿ ನೀವು ಆದಾಯಕರ ಕಟ್ಟಿಲ್ಲ. ಆದರೆ, 2010ರಲ್ಲಿ 57 ಸಾವಿರ ಕೋಟಿ ರುಪಾಯಿ ಸಂಪಾದನೆ ಮಾಡಿದ್ದೀರಿ ? ಅದು ಹೇಗೆ ಬಂತು. ಇದು ನ್ಯಾಯದ ಸಂಪಾದನೆಯಾ ? ಪ್ರವಾಹ ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದೀರಿ. ಒಂದಾದರೆ ಮನೆ ಕಟ್ಟಿಸಿ ಕೊಟ್ಟಿದ್ದೀರಾ ?

ಬಳ್ಳಾರಿ ಏನೂ ರೆಡ್ಡಿಗಳ ಜಹಗೀರಾ ? ಅಥವಾ ಇವರು ಇಲ್ಲಿನ ರೌಡಿಗಳಾ ? ಅಥವಾ ಸ್ವಯಂ ಘೋಷಿತ ಚಕ್ರವರ್ತಿಗಳಾ ? ಎಂದು ಕಿಡಿಕಾರಿದರು. ಬಳ್ಳಾರಿ ಜನರ ಶೋಷಣೆ ಮಾಡುತ್ತಿರುವ ರೆಡ್ಡಿಗಳಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಬಳ್ಳಾರಿಯಲ್ಲಿ ಕಾನೂನು ಇದೆಯೇ ? ಪೊಲೀಸ್ ಠಾಣೆಯಲ್ಲಿ ನ್ಯಾಯವಾಗಿ ಕೆಲಸವಾಗುತ್ತಿದೆಯೇ ? ಇದಕ್ಕೆ ಯಾರೂ ಹೊಣೆ ಎಂದು ಸಿದ್ದು ಪ್ರಶ್ನಿಸಿದರು.

ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಈ ಮನುಷ್ಯ ಹೇಡಿ, ಅಳಬುರುಕ ಮುಖ್ಯಮಂತ್ರಿ. ಕಾಂಗ್ರೆಸ್ಸಿಗರು ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಹೇಳುವ ರೆಡ್ಡಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದುಕೊಂಡು ಏಕೆ ಕ್ರಮಕೈಗೊಳ್ಳಲಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ, ಅವರನ್ನು ನೇತು ಹಾಕೋಣ. ಶಿಕ್ಷೆ ಕೊಡಿಸೋಣ. ಇದಕ್ಕಾಗಿ ಸಿಬಿಐ ತನಿಖೆ ಆಗಬೇಕು ಎನ್ನುವುದು ನನ್ನ ಏಕೈಕ ಆಗ್ರಹ. ಅದು ಜಾರಿಯಾಗುವವರೆಗೂ ನಾನು ಹೋರಾಟ ಕೈಬಿಡುವುದಿಲ್ಲ ಎಂದು ಸಿದ್ದು ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ ಮಾಡುವವರಿಗೆ ಕಡಿವಾಣ ಹಾಕಲಿಲ್ಲ ಎಂದರೆ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಏನು? ಬಳ್ಳಾರಿ ನಮ್ಮದು, ನಿಮ್ಮದು, ಕನ್ನಡಿಗರದು, ಆದರೆ, ರೆಡ್ಡಿಗಳು ಕನ್ನಡಿಗರಲ್ಲ, ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಸಿದ್ದು ಹೇಳಿದರು. ಪುಕ್ಕಟೆ ಕರೆಂಟ್ ನೀಡುವ ಭರವಸೆ? ಸಂತ್ರಸ್ಥರಿಗೆ ಮನೆಗಳನ್ನು ಕಟ್ಟಿಸಿದರಾ? ಯುವಕರಿಗೆ ಭತ್ಯೆ ಕೊಟ್ಟರಾ? 14 ಜಿಲ್ಲೆಗಳಲ್ಲಿನ ಸಂತ್ರಸ್ಥರ ಗತಿ ಏನಾಯಿತು ? 50 ಸಾವಿರ ಮನೆ ಕಟ್ಟಿಸಿ ಕೊಡುತ್ತೇವೆ ಎಂದು ರೆಡ್ಡಿಗಳು ಮನೆ ಕಟ್ಟಿಸಿಕೊಟ್ಟರಾ? ಎಂದು ಸಿದ್ದು ರೆಡ್ಡಿಗಳ ಜನ್ಮ ಜಾಲಾಡಿದರು.

ಯಡ್ಡಿ ನಪುಂಸಕ ಗೊತ್ತಿಲ್ವೆ ನಿಮಗೆ : ಮಾನಾನೂ ಇಲ್ಲ, ಮರ್ಯಾದೆನೂ ಇಲ್ಲ ಈ ಯಡಿಯೂರಪ್ಪನಿಗೆ ಎಂಬ ಮಾತಿನೊಂದಿಗೆ ಭಾಷಣ ಆರಂಭಿಸಿದ ಮಾಜಿ ಕೇಂದ್ರ ಮಂತ್ರಿ ಸಿ ಎಂ ಇಬ್ರಾಹಿಂ ತಮ್ಮ ಮಾತಿನುದ್ದಕ್ಕೂ ಸರಕಾರ, ರೆಡ್ಡಿಗಳು, ಯಡಿಯೂರಪ್ಪ, ಆರ್ಎಸ್ಎಸ್ ಮೇಲೆ ತೀವ್ರ ವಾಕ್ ಪ್ರಹಾರ ನಡೆಸಿದರು.

ಗೇಲಿ, ಲೇವಡಿ, ಟೀಕೆ, ಆಕ್ರೋಶ, ಚುಚ್ಚು ಮಾತುಗಳಿಂದ ನೆರದಿದ್ದ ಲಕ್ಷಾಂತರ ಜನಸಮೂಹಕ್ಕೆ ಮನರಂಜನೆ ಒದಗಿಸಿದರು. ಯಡಿಯೂರಪ್ಪ ಅವರನ್ನು ನಪುಂಸಕ ಎಂದು ಜರಿದ ಇಬ್ರಾಹಿಂ, ನಾವು ಹುಟ್ಟಿಸಿದ ಮಕ್ಕಳನ್ನು ನಾನು ಹುಟ್ಟಿಸಿದ ಮಕ್ಕಳು ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿಗೆ ನಾಚಿಕೆ ಆಗುವುದಿಲ್ಲವೆ ಎಂದು ಗೇಲಿ ಮಾಡಿದರು.

ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರಿಗಾಗಿ ಬಳ್ಳಾರಿಯಿಂದ ಬೆಂಗಳೂರಿನವರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಸಮಾವೇಶಕ್ಕೆ ಪ್ರತಿಯಾಗಿ ಬಿಜೆಪಿ ಆಗಸ್ಟ್ 20ಕ್ಕೆ ಬಳ್ಳಾರಿಯಲ್ಲೇ ಸಮಾವೇಶ ನಡೆಯಲಿದೆ.

ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X